"ರಾಜೀನಾಮೆ ನೀಡಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಮತ್ತೆ ಬಾ" ಶ್ರೀರಾಮುಲುಗೆ ಬದ್ಧ ವೈರಿ ತಿಪ್ಪೇಸ್ವಾಮಿ ಸವಾಲು
Recommended Video
ಚಿತ್ರದುರ್ಗ, ನವೆಂಬರ್ 21: "ರಾಜೀನಾಮೆ ನೀಡಿ ಮತ್ತೆ ಮೊಳಕಾಲ್ಮೂರು ಮತ ಕ್ಷೇತ್ರಕ್ಕೆ ಬಾ" ಎಂದು ಶ್ರೀರಾಮುಲು ಬದ್ಧವೈರಿ ಎಂದು ಕರೆಸಿಕೊಂಡಿರುವ ಮಾಜಿ ಶಾಸಕ ತಿಪ್ಪೇಸ್ವಾಮಿ ಆರೋಗ್ಯ ಸಚಿವ ಶ್ರೀರಾಮುಲುಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಮಾಜಿ ಶಾಸಕ ತಿಪ್ಪೇಸ್ವಾಮಿ, "ದೇವರ ಮೇಲೆ ಆಣೆ ಮಾಡಿ ನನಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದೆ, ನಾನೇ ಡಿಸಿಎಂ ಆಗುತ್ತೇನೆ, ಸಿಎಂ ಆಗುತ್ತೇನೆ ಅಂದಿದ್ದಲ್ಲ, ಬರೀ ಸುಳ್ಳು ಹೇಳೋದೆ ನಿನಗೆ ಕಾಯಕ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯಗೆ ರಾಜೀನಾಮೆ ಸವಾಲು ಎಸೆದ ಶ್ರೀರಾಮುಲು
"ಬಿ.ಶ್ರೀರಾಮುಲು ಅಂದ್ರೆ ಬುರುಡೆ ಶ್ರೀರಾಮುಲು ಅಂತ. ನೀನೆಲ್ಲಿ? ಸಿದ್ದರಾಮಯ್ಯ ಎಲ್ಲಿ? ನೀನು ಸಿದ್ದರಾಮಯ್ಯಗೆ ಸವಾಲು ಹಾಕುವುದಲ್ಲ, ನೀನೇ ರಾಜೀನಾಮೆ ಕೊಟ್ಟು ಮೊಳಕಾಲ್ಮೂರು ಕ್ಷೇತ್ರಕ್ಕೆ ಮತ್ತೆ ಬಾ, ಸವಾಲು ಹಾಕಿ ನನ್ನ ಎದುರು ನಿಂತು ಗೆದ್ದು ತೋರಿಸು, ಆಮೇಲೆ ಸಿದ್ದರಾಮಯ್ಯ ಬಗ್ಗೆ ಮಾತನಾಡು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಾನು ಕ್ಷೇತ್ರಕ್ಕೆ ತಂದ ಯೋಜನೆಗಳಿಂದ ಹೆಸರು ಪಡೆದುಕೊಳ್ಳುತ್ತಿದ್ದೀಯ. ನಿನ್ನದು ಈ ಕ್ಷೇತ್ರಕ್ಕೆ ಯಾವುದೇ ಕಾಣಿಕೆ ಇಲ್ಲ. ಒಂದು ಲೆಟರ್ ಬೇಕಾದರೆ ಜನ ನಿನ್ನನ್ನು ಭೇಟಿ ಮಾಡೋಕೆ ಆಗ್ತಿಲ್ಲ" ಎಂದು ಟೀಕಿಸಿದರು.
ನಿಮಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಎದುರಿಸಿ ಎಂದು ಸಚಿವ ಶ್ರೀರಾಮುಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸವಾಲು ಹಾಕಿದ್ದರು.