ಮಾಜಿ ಸಚಿವ, ಚಳ್ಳಕೆರೆ ಮಾಜಿ ಶಾಸಕ ತಿಪ್ಪೇಸ್ವಾಮಿ ವಿಧಿವಶ
ಚಿತ್ರದುರ್ಗ, ಆಗಸ್ಟ್ 08 : ಮಾಜಿ ಸಚಿವ, ಚಳ್ಳಕೆರೆ ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬುಧವಾರ ಬೆಳಗ್ಗೆ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ತಿಪ್ಪೇಸ್ವಾಮಿ (76) ವಿಧಿವಶರಾದರು. ಬುಧವಾರ ಸಂಜೆಯ ವೇಳೆಗೆ ಪಾರ್ಥಿವ ಶರೀರವನ್ನು ಚಳ್ಳಕೆರೆಗೆ ತೆಗೆದುಕೊಂಡು ಹೋಗಲಾಗುತ್ತದೆ.
ಮಾಜಿ ಸಚಿವ ತಿಪ್ಪೇಸ್ವಾಮಿಗೆ 'ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ'
ನಾಲ್ಕು ದಶಕಗಳ ಕಾಲ ರಾಜಕೀಯ ಹೋರಾಟ ನಡೆಸಿದ್ದ ತಿಪ್ಪೇಸ್ವಾಮಿ ಅವರು ರಾಜ್ಯ ಸರ್ಕಾರದಿಂದ 2017ರಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪಡೆದಿದ್ದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ 'ಶ್ರೀ ವಾಲ್ಮೀಕಿ ಗುರುಪೀಠ' ಸ್ಥಾಪಿಸುವಲ್ಲಿ ತಿಪ್ಪೇಸ್ವಾಮಿ ಅವರ ಕೊಡುಗೆ ಅಪಾರವಾದದ್ದು.
1980ರಲ್ಲಿ ಚಳ್ಳಕೆರೆ ಪುರಸಭಾ ಅಧ್ಯಕ್ಷರಾಗುವ ಮೂಲಕ ರಾಜಕೀಯವನ್ನು ಪ್ರವೇಶಿಸಿದರು. 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಎಚ್.ಡಿ.ದೇವೇಗೌಡ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ, ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದರು.
ಜೆಡಿಎಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ತಿಪ್ಪೇಸ್ವಾಮಿ ಅವರು ನಂತರ ಬಿಜೆಪಿ ಸೇರಿದ್ದರು. ಬಿ.ಎಸ್.ಯಡಿಯೂರಪ್ಪ ಜೊತೆ ಕೆಜೆಪಿಗೆ ಹೋಗಿದ್ದ ಅವರು, ಪುನಃ ಬಿಜೆಪಿಗೆ ವಾಪಸ್ ಆಗಿದ್ದರು.
ಪತ್ನಿ ವಿಮಲಮ್ಮ, ಪುತ್ರ ಕೆ.ಟಿ.ಕುಮಾರಸ್ವಾಮಿ ಮತ್ತು ಪುತ್ರಿ ಕೆ.ಟಿ.ಭವ್ಯ ಸೇರಿದಂತೆ ಅಪಾರ ಅಭಿಮಾನಿಗಳನ್ನು ತಿಪ್ಪೇಸ್ವಾಮಿ ಅವರು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ ನಡೆಯುವ ಸಾಧ್ಯತೆ ಇದೆ.
ಎಚ್.ಡಿ.ಕುಮಾರಸ್ವಾಮಿ ಸಂತಾಪ : ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ನಿಧನಕ್ಕೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಾಲ್ಕು ದಶಕಗಳ ರಾಜಕೀಯ ಹೋರಾಟ, ವಾಲ್ಮೀಕಿ ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ 2017ರಲ್ಲಿ ಇವರಿಗೆ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.
ಚಳ್ಳಕೆರೆ ಪುರಸಭಾ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ ತಿಪ್ಪೇಸ್ವಾಮಿ ಅವರು, ಪ್ರಥಮ ಬಾರಿಗೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಎಚ್.ಡಿ. ದೇವೇಗೌಡರ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಹಾಗೂ ಜೆ.ಎಚ್.ಪಟೇಲ್ ಅವರ ಆಡಳಿತದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ ಸಮುದಾಯವನ್ನು ಸಂಘಟಿಸಿ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ 'ಶ್ರೀ ವಾಲ್ಮೀಕಿ ಗುರುಪೀಠ' ಸ್ಥಾಪಿಸಲು ಶ್ರಮಿಸಿದ ಅವರ ಸಾಧನೆ ನಿಜಕ್ಕೂ ಸ್ಮರಣೀಯ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಪ್ಪೇಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಚಿವರು ಹಾಗೂ ಚಳ್ಳಕೆರೆಯ ಮಾಜಿ ಶಾಸಕರೂ ಆಗಿದ್ದ ಶ್ರೀ ತಿಪ್ಪೇಸ್ವಾಮಿಯವರ ಸಾವಿನ ಸುದ್ದಿ ಅತೀವ ನೋವುಂಟುಮಾಡಿದೆ. ಸಚಿವ ಸಂಪುಟದಲ್ಲಿ ಜತೆಯಲ್ಲಿ ಕೆಲಸ ಮಾಡಿದ್ದ ನನಗೆ ತಿಪ್ಪೇಸ್ವಾಮಿಯವರು ಆತ್ಮೀಯ ಸ್ನೇಹಿತರಾಗಿದ್ದರು. ಮೃತರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.@INCKarnataka pic.twitter.com/7pNodPro0W
— Siddaramaiah (@siddaramaiah) August 8, 2018