ಕೊಳೆತ ತರಕಾರಿ ಕೊಟ್ಟು ಪ್ರಚಾರ ಗಿಟ್ಟಿಸಿಕೊಂಡರಾ ಮಾಜಿ ಸಚಿವ?
ಚಿತ್ರದುರ್ಗ, ಮೇ 1: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಬಡವರಿಗೆ ಸರ್ಕಾರದಿಂದ ಉಚಿತವಾಗಿ ಪಡಿತರ ಅಕ್ಕಿ ವಿತರಣೆ ಮಾಡಿದ್ದರು.
ಇನ್ನುಳಿದಂತೆ ವೈಯಕ್ತಿಕವಾಗಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ ತರಕಾರಿ, ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಹೆಸರಿನಲ್ಲಿ ತರಕಾರಿ ಕೊಟ್ಟಿದ್ದಾರೆ. ಆದರೆ ತರಕಾರಿ ಕೊಳೆತಿದೆಯೆಂದು ಗ್ರಾಮಸ್ಥರು ಬೀದಿಗೆ ಎಸೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರಿಯಬ್ಬೆಪಾಳ್ಯ ಗ್ರಾಮದಲ್ಲಿ ನಡೆದಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಜಿ ಸಚಿವರು ಕೊಳೆತ ತರಕಾರಿ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಕಾಡತೊಡಗಿದ್ದು, ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿವೆ.
ಬುಧವಾರ ಮಧ್ಯಾಹ್ನ ಹರಿಯಬ್ಬೆಪಾಳ್ಯ ಗ್ರಾಮದಲ್ಲಿ ಮೂಲಂಗಿ, ಕ್ಯಾರೆಟ್, ಟೊಮೋಟೊ, ನುಗ್ಗೆಕಾಯಿ, ಎಲೆಕೋಸು ಸೇರಿ ಮಾಜಿ ಸಚಿವರ ಪೋಟೋ ಇರುವ ಬ್ಯಾಗ್ ನಲ್ಲಿ ಮನೆ ಮನೆಗೆ ತರಕಾರಿ ಹಂಚಲಾಗಿದೆ.
ತರಕಾರಿ ಕೊಳೆತಿದೆ ಎಂದು ಟೊಮೋಟೊ, ಮೂಲಂಗಿ, ನುಗ್ಗೆಕಾಯಿ ಮತ್ತು ಚೀಲವನ್ನು ರಸ್ತೆಯಲ್ಲಿ ಬಿಸಾಡಿದ್ದಾರೆ. ಮಾಜಿ ಸಚಿವರ ಪ್ರಚಾರಕ್ಕೆ ಕೊಳೆತ ತರಕಾರಿ ಬೇಕಿತ್ತಾ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬಂದಿವೆ.