ನಾನು ತಂದ ಅನುದಾನದ ಹಣ ಎಲ್ಲಿ ಹೋಯ್ತು?; ಮಾಜಿ ಸಚಿವ ಡಿ. ಸುಧಾಕರ್
ಚಿತ್ರದುರ್ಗ, ನವೆಂಬರ್ 4: "ನನ್ನ ಅಧಿಕಾರದ ಅವಧಿಯಲ್ಲಿ ತಂದಿದ್ದ ಅನುದಾನ ಎಲ್ಲಿ ಹೋಯ್ತು? ಈಗ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ" ಎಂದು ಮಾಜಿ ಸಚಿವ ಡಿ. ಸುಧಾಕರ್ ಆರೋಪಿಸಿದ್ದಾರೆ.
ಇಂದು ಹಿರಿಯೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2018ರ ನಮ್ಮ ಸರ್ಕಾರದಲ್ಲಿ ಹಿರಿಯೂರು ತಾಲ್ಲೂಕಿಗೆ ವಿಶೇಷ ಅನುದಾನವಾಗಿ 25 ಕೋಟಿ ರೂಪಾಯಿಯನ್ನು ತರಲಾಗಿತ್ತು. ಮತ್ತೊಂದು ಸೇತುವೆ ಕಾಮಗಾರಿಗೆ 08 ಕೋಟಿ ಅನುದಾನ ತರಲಾಗಿತ್ತು. ಒಟ್ಟು 33 ಕೋಟಿ ಹಣದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿತ್ತು" ಎಂದರು.
ಹಿರಿಯೂರು ನಗರಸಭೆಯ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ: ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ
ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು, ಈಗಿರುವ ಸರ್ಕಾರ ಹಣ ಇಲ್ಲ ಎಂದು ಹೇಳಿ, ಅನುದಾನದ ಹಣವನ್ನು ವಾಪಸ್ ಪಡೆದುಕೊಂಡಿದೆ ಎಂದು ಆರೋಪಿಸಿದರು.
ಹುಳಿಯಾರು ರಸ್ತೆ ಅಗಲೀಕರಣ ಹಾಗೂ ಹಿರಿಯೂರು ನಗರದ ಗಾಂಧಿ ವೃತ್ತದಿಂದ ಬಿ.ಟಿ. ಸರ್ಕಲ್ ವರೆಗೆ ಡಬಲ್ ರಸ್ತೆ ಅಗಲೀಕರಣದ ಕುರಿತು ಅಂದಿನ ಡಿಸಿಯವರ ಸಮ್ಮುಖದಲ್ಲಿ, ಹಿರಿಯೂರು ಪಟ್ಟಣದ ಎಲ್ಲ ವರ್ತಕರು ಸೇರಿ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಂಡಿದ್ದೆವು. ಆದರೆ ಕಾಮಗಾರಿ ಆಗುತ್ತಿಲ್ಲ, ಆ ಹಣ ಎಲ್ಲಿ ಹೋಗಿದೆ ಗೊತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಹಾಗೂ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ ಎಂದು ದೂರಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಯಾವುದೇ ಕಾಮಗಾರಿಯನ್ನು ಕಳಪೆಯಾಗದಂತೆ, ಭ್ರಷ್ಟಾಚಾರ ಮುಕ್ತವಾಗಿರುವಂತೆ ನೋಡಿಕೊಂಡಿದ್ದೆ. ತಾಲೂಕಿನಲ್ಲಿ ಇಂದು ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಜನಸಾಮಾನ್ಯರು ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
Recommended Video
ಇದರ ಮಧ್ಯೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಹಿರಿಯೂರು ಪಟ್ಟದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಆಯ್ಕೆಮಾಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಮ್ಮ ಪಕ್ಷದ ಎಲ್ಲ ನಗರಸಭೆಯ ಸದಸ್ಯರು ಉತ್ತಮ ಕೆಲಸ ನಿರ್ವಹಿಸಿ ದಕ್ಷ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.