ಮಾಜಿ ಸಚಿವ ಡಿ.ಮಂಜುನಾಥ್ ನಿಧನ
ಚಿತ್ರದುರ್ಗ, ಫೆಬ್ರವರಿ 3: ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಮಂಜುನಾಥ್ (92) ಇಂದು ನಿಧನರಾದರು. ಹಿರಿಯೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಅವರು, ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರವುಳಿದಿದ್ದರು.
ಈಚೆಗೆ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ 3:30ರ ಸುಮಾರಿಗೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಚಿತ್ರದುರ್ಗದ ಚಳ್ಳಕೆರೆಯ ಜಾಜೂರು ಗ್ರಾಮದಲ್ಲಿ ಜನಿಸಿದ್ದ ಅವರು, 1959ರಲ್ಲಿ ತಾಲ್ಲೂಕು ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೈಸೂರು ರಾಜ್ಯದ ಯುವ ರೈತರ ಸಂಘದ ಸದಸ್ಯರಾದರು ಮತ್ತು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು.
ಮಾಜಿ ಸಚಿವ, ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ನಿಧನ
ಚಿತ್ರದುರ್ಗದಲ್ಲಿ ಹಲವಾರು ಹಾಸ್ಟೆಲ್ ಸಮಿತಿಯ ಸದಸ್ಯರಾಗಿದ್ದರು. ಚಳ್ಳಕೆರೆ ತಾಲ್ಲೂಕಿನ ಶ್ರೀ ಬಸವೇಶ್ವರ ಸಹಕಾರ ಕೃಷಿ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು.
ನಾಲ್ಕನೇ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ (1967) ಹಿರಿಯೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ವಿಧಾನಸಭೆಯ ಉಪ ಸ್ಪೀಕರ್ ಆಗಿದ್ದರು. ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು.
1977ರಲ್ಲಿ ಜನತಾ ಪಕ್ಷಕ್ಕೆ ಸೇರಿದರು. ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಜನತಾ ಪಕ್ಷದ ಅಧ್ಯಕ್ಷರಾಗಿ 3 ವರ್ಷ ಕೆಲಸ ಮಾಡಿದರು. ಮಾರ್ಚ್, 1983ರಲ್ಲಿ ಶಾಸಕಾಂಗ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡರು. 1984ರ ಆಗಸ್ಟ್ 18ರಿಂದ ಯೋಜನಾ, ಸಂಸ್ಥೆಗಳ ಸಚಿವರಾಗಿ ನೇಮಕಗೊಂಡರು. 1985ರ ಮಾರ್ಚ್ನಲ್ಲಿ ಮತ್ತೆ ಕಾರ್ಮಿಕ ಸಚಿವರಾಗಿ ನೇಮಕಗೊಂಡರು. ಜುಲೈ 18, 1986ರಿಂದ 1987ರ ಆಗಸ್ಟ್ 26ರವರೆಗೆ ಶಿಕ್ಷಣ ಸಚಿವರಾಗಿ ನೇಮಕಗೊಂಡರು. ಸೆಪ್ಟೆಂಬರ್ 2, 1987ರಂದು ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.
ಅವರು ಪತ್ನಿ, ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.