ಚಿತ್ರದುರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ; ಚಿರತೆಗೆ ಬಲಿಯಾಗಿರುವ ಶಂಕೆ
ಚಿತ್ರದುರ್ಗ, ಡಿಸೆಂಬರ್ 5: ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾಚರ್ ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಮೀನಿಗೆ ಹೋದವ ಮರಳಿ ಬರಲೇ ಇಲ್ಲ; ಕಾಡು ಪ್ರಾಣಿಗೆ ಆಹಾರವಾದ ರೈತ
ಹೊಸದುರ್ಗ ತಾಲೂಕಿನ ಹಾರಗೊಂಡನಹಳ್ಳಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಹಾರಗೊಂಡನಹಳ್ಳಿ ಗುಡ್ಡದ ಬಳಿ ಬೋನ್ ಇಟ್ಟಿತ್ತು. ಈ ಸಂಬಂಧ ಅರಣ್ಯ ವೀಕ್ಷಣೆಗೆ ತೆರಳಿದ್ದ ವಾಚರ್ ಬಸವರಾಜಪ್ಪ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಈ ಹಿಂದೆ ಮೈಲಾರಪುರ ಅರಣ್ಯ ಪ್ರದೇಶದಲ್ಲಿ ಚಿರತೆ ತನ್ನನ್ನು ಬೆನ್ನಟ್ಟುತ್ತಿರುವ ಬಗ್ಗೆ ಫಾರೆಸ್ಟ್ ಗಾರ್ಡ್ ಹರೀಶ್ ಎಂಬ ವ್ಯಕ್ತಿಗೆ ಕೊನೆಯ ಬಾರಿ ಕರೆ ಮಾಡಿ, ಕಾಪಾಡಿ ಎಂದು ಕೇಳಿಕೊಂಡಿದ್ದರು. ಆಗಿನಿಂದಲೂ ಬಸವರಾಜಪ್ಪನ ಸುಳಿವು ಪತ್ತೆಯಾಗಿಲ್ಲ. ನಿನ್ನೆಯಿಂದ ಅರಣ್ಯ ಸಿಬ್ಬಂದಿ ಇಲಾಖೆ ಕೂಂಬಿಂಗ್ ನಡೆಸಿದ್ದು, ಬಸವರಾಜಪ್ಪ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಅವರ ಹುಡುಕಾಟಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ.
ವಾಚರ್ ಪತ್ತೆಗಾಗಿ ನಡೆಯುತ್ತಿರುವ ಕೂಂಬಿಂಗ್ ಕಾರ್ಯಾಚರಣೆ ವೇಳೆ ಕೆನ್ನೆಡಲು ಅರಣ್ಯ ಪ್ರದೇಶದಲ್ಲಿ ಆನೆ ಹೆಜ್ಜೆಗಳೂ ಕಂಡುಬಂದಿದ್ದು, ಕೆನ್ನೆಡಲು, ಚಿಕ್ಕಸಿದ್ದವ್ವನಹಳ್ಳಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಆನೆ ಇರುವ ಸಾಧ್ಯತೆಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದ ರೈತರಲ್ಲಿ ಆತಂಕ ಮನೆಮಾಡಿದ್ದು, ಸಂಜೆ ನಾಲ್ಕು ಗಂಟೆಯೊಳಗೆ ಮನೆ ಸೇರಿಕೊಳ್ಳುವಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.