ಮೇಟಿಕುರ್ಕೆ ಬಳಿ ಭೀಕರ ರಸ್ತೆ ಅಪಘಾತ:ಒಂದೇ ಕುಟುಂಬದ ಐವರ ದುರ್ಮರಣ
ಹಿರಿಯೂರು, ಮೇ.02:ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ಸಂಜೆ (ಏ.01) ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಬಳಿ ನಡೆದಿದೆ.
ಭದ್ರಾವತಿಯ ಭಂಡೆ ಮಾರಮ್ಮ ದೇವಿಯ ಜಾತ್ರೆಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಶಿವಮೊಗ್ಗ: ಭೀಕರ ಕಾರು ಅಪಘಾತ ಒಂದೇ ಕುಟುಂಬದ ಐವರ ಸಾವು
ವೇಗವಾಗಿ ಚಲಿಸುತ್ತಿದ್ದ ಇನೋವಾ ಕಾರಿನ ಮುಂದಿನ ಟೈರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು, ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಚಿತ್ರದುರ್ಗ ಮಾರ್ಗವಾಗಿ ಎದುರಿಗೆ ಬರುತ್ತಿದ್ದ ರಾಜಸ್ಥಾನ ಮೂಲದ ಲಾರಿಗೆ ರಭಸವಾಗಿ ಅಪ್ಪಳಿಸಿದ ಕಾರಣ ಕಾರಿನಲ್ಲಿದ್ದವರ ಪೈಕಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ತಾಯಮ್ಮ (50), ಸುಷ್ಮಿತಾ (21), ಲತಾ (26) ,ವೀಣಿಕಾ (3), ಜ್ಞಾನವಿ (3) ಎಂದು ತಿಳಿದು ಬಂದಿದೆ. ಕೇಶವಯ್ಯ ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ವ್ಯಕ್ತಿಗಳನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.