ಹೊಳಲ್ಕೆರೆ ಬಿಜೆಪಿ ಶಾಸಕರ ವಿರುದ್ಧ ಆಸ್ತಿ ಕಬಳಿಕೆ ಆರೋಪ
ಚಿತ್ರದುರ್ಗ ಮೇ 5: ಅನೂರ್ಜಿತ ಜಿಪಿಎ ಅಟಾರ್ನಿ ಬಳಸಿ ಆಸ್ತಿ ಕಬಳಿಕೆ ಆರೋಪದ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಚಂದ್ರಪ್ಪ, ಶಾಸಕರ ಪತ್ನಿ ಹಾಗೂ ಮಕ್ಕಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪದ್ಮಜಾ ಎಂಬುವವರು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಆಸ್ತಿಯಲ್ಲಿ ಪಾಲು ಬರಬೇಕಿತ್ತು ಎಂದು ನಾಗರಾಜು, ಎಂ. ಚಂದ್ರಪ್ಪ ಕುಟುಂಬದ ವಿರುದ್ಧ ಶ್ರೀಧರ್ ಎಂಬುವವರ ಸಹೋದರಿ ಪದ್ಮಜಾ ದೂರು ಸಲ್ಲಿಸಿ, ಕೋರ್ಟ್ ಮೊರೆ ಹೋಗಿದ್ದಾರೆ.
ಕೋರ್ಟ್ ನೀಡಿದ ಸೂಚನೆಯಂತೆ ಹೊಳಲ್ಕೆರೆ ಠಾಣೆ ಪೊಲೀಸರು ಎಂ. ಚಂದ್ರಪ್ಪ, ಶಾಸಕರ ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ಧ ಏಫ್ಐಆರ್ ದಾಖಲಿಸಿದ್ದಾರೆ.
ಪವರ್ ಆಫ್ ಅಟಾರ್ನಿ ದುರುಪಯೋಗ ಮಾಡಿರುವ ನಾಗರಾಜ್ ಎ1 ಆರೋಪಿಯಾಗಿದ್ದು, ಚಂದ್ರಕಲಾ, ರಘು ಚಂದನ್, ದೀಪ್ ಚಂದನ್ ಎ2 ಆರೋಪಿ. ಒಟ್ಟಾರೆ ಆಸ್ತಿ ಪರಬಾರೆ ದುರುಪಯೋಗ ಪ್ರಕ್ರಿಯೆಯಲ್ಲಿದ್ದ 6 ಮಂದಿ ವಿರುದ್ಧ ಏಫ್ಐಆರ್ ದಾಖಲಿಸಿದ್ದು, ಸಬ್ ರಿಜಿಸ್ಟರ್ ಕಚೇರಿ ಸಿಬ್ಬಂದಿ ನಾಗರತ್ನಮ್ಮ ಎ3, ಪತ್ರ ಬರಹಗಾರ ಲೋಕೇಶ್ ಎ4, ಸಾಕ್ಷಿಗಳಾದ ಪ್ರವೀಣ್ ಎ5 ಮಹೇಶ್ ಎ6 ಆರೋಪಿಗಳು.
ಚಂದ್ರಕಲಾ 34 ಲಕ್ಷ 80 ಸಾವಿರ, ರಘುಚಂದನ್ 38 ಲಕ್ಷ 80 ಸಾವಿರ, ದೀಪ್ ಚಂದನ್ 38 ಲಕ್ಷ 80 ಸಾವಿರ ಹಣ ನೀಡಿ ನಾಗರಾಜ್ ಬಳಿ ಆಸ್ತಿ ಕ್ರಯ ಮಾಡಲಾಗಿದೆ. ಅಟಾರ್ನಿ ದುರುಪಯೋಗ ಮಾಡಿ ಆಸ್ತಿ ಖರೀದಿಸಿರುವವರ ವಿರುದ್ಧ ಐಪಿಸಿ ಸೆಕ್ಷನ್ 1860 (404, 405, 415, 420, 423, 463, 464, 466, 470, 149 ಸೆಕ್ಷನ್ ಅಡಿಯಲ್ಲಿ ಏಫ್ಐಆರ್ ಚಂದ್ರಕಲಾ ವಿರುದ್ಧ ಕ್ರೈಂ ನಂ 0147, ರಘುಚಂದನ್ ವಿರುದ್ಧ ಕ್ರೈಂ ನಂ,145, ದೀಪ್ ಚಂದನ್, ವಿರುದ್ಧ ಕ್ರೈಂ ನಂ 146 ನ ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ.