ಭದ್ರಾ ನದಿಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿ:ರೈತರ ಪ್ರತಿಭಟನೆ
ಚಿತ್ರದುರ್ಗ, ಅಕ್ಟೋಬರ್ 1: ಬಹುನಿರೀಕ್ಷಿತ ಭದ್ರಾ ಯೋಜನೆಯಲ್ಲಿ ಭದ್ರಾ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸದ ಅಧಿಕಾರಿಗಳ ವಿರುದ್ಧ ಹಿರಿಯೂರು ರೈತರು ಪ್ರತಿಭಟನೆ ನಡೆಸಿದರು.
ಹಿರಿಯೂರು ನೀರವಾರಿ ಇಲಾಖೆ ಆವರಣದಲ್ಲಿ ಸೇರಿದ ರೈತರು ಜಲ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಕಛೇರಿ ಕೃಷ್ಣದಲ್ಲಿ ಸೆಪ್ಟಂಬರ್ 4 ರಂದು ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆಗೆ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ, ಸಂಸದ ನಾರಾಯಣಸ್ವಾಮಿ, ಶಾಸಕ ಗೂಳಿಹಟ್ಟಿ ಶೇಖರ್, ಹಿರಿಯೂರು ರೈತರು ಹಾಗೂ ಜಲ ನಿಗಮದ ಅಧಿಕಾರಿಗಳು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅಕ್ಟೋಬರ್ 1 ರಂದು ಭದ್ರಾ ನೀರು ವಾಣಿ ವಿಲಾಸ ಸಾಗರ ಸಾಗರಕ್ಕೆ ಹರಿಸಲು ತಿರ್ಮಾನ ಕೈಗೊಂಡಿದ್ದರು.
ಇಂದು ಭದ್ರಾ ನೀರು ವಿವಿ ಸಾಗರಕ್ಕೆ ನೀರು ಹರಿಸದ ಕಾರಣ ಸಿಡಿದೆದ್ದ ರೈತರು ಪ್ರತಿಭಟನೆ ಕೈಗೊಂಡರು.ಸರ್ಕಾರಕ್ಕೆ ಹಾಗೂ ರೈತರಿಗೆ ಸುಳ್ಳು ಹೇಳಿ ವಂಚಿಸಿ ರೈತರನ್ನ ದಾರಿ ತಪ್ಪಿಸಿ ಭದ್ರಾ ಅಧಿಕಾರಿಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ತಾಲೂಕಿನಲ್ಲಿ ಬರ ಇದ್ದು, ತೋಟಗಳು ಒಣಗಿ ಹೋಗಿವೆ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರಿಗಾಗಿ ಆಹಾಕಾರ ಉಂಟಾಗಿದೆ ಹೀಗಿರುವಾಗ ಭದ್ರಾ ಅಧಿಕಾರಿಗಳು ಸುಳ್ಳು ಹೇಳುವ ಮೂಲಕ ರೈತರನ್ನು ದಿಕ್ಕು ತಪ್ಪಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಬೆಟ್ಟತಾವರೆಕೆರೆ ಹತ್ತಿರ ತಾಂತ್ರಿಕ ದೋಷಗಳಿಂದ ಭದ್ರಾ ನೀರು ಹರಿಸುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಂಸದ ನಾರಾಯಣಸ್ವಾಮಿಯವರು ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಸಂಸದರು ಕೂಡ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ರೈತರು ಆರೋಪಿಸಿದರು. ಜಲ ನಿಗಮದ ಅಧಿಕಾರಿಗಳು ನೀರು ಬಿಡುವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿದ್ದು ಸಮಾಜಿಕ ಜಾಲತಾಣಣಗಳಲ್ಲಿ ಹರಿದು ಬಿಟ್ಟಿದ್ದು ಈಗ ನಾವು ಮಾಡಿಸಿಲ್ಲ, ನಮಗೆ ಅದು ಗೊತ್ತಿಲ್ಲ ಎಂದು ಹೇಳುತ್ತಾರೆ ಇಲ್ಲಿ ಯಾರನ್ನು ಹೇಗೆ ನಂಬಬೇಕು ಎಂದರು.
ದಿನದ 24 ಗಂಟೆಯೊಳಗೆ ಭದ್ರಾ ನೀರು ವಿವಿ ಸಾಗರಕ್ಕೆ ಹರಿಸಸಿದ್ದರೆ ಹೆದ್ದಾರಿ ತಡೆ ಮಾಡಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ವಿದೇಶಕ್ಕೆ ಪ್ರವಾಸ ಹೋಗುವ ಎಂಜಿನಿಯರ್ಗಳು ಜ್ಞಾನ ಮತ್ತು ತಿಳುವಳಿಕೆ ಇಲ್ಲದ ಮೇಲೆ ಇವರು ಯಾಕೆ ಎಂಜಿನಿಯರ್ಗಳು ಹುದ್ದೆಯಲ್ಲಿ ಇರಬೇಕು, ರಾಜೀನಾಮೆ ನೀಡಿ ಮನೆಗೆ ಹೋದರೆ ಸಾಕಷ್ಟು ನೀರುದ್ಯೋಗಿಗಳು ಕೆಲಸ ಮಾಡಲು ಇದ್ದಾರೆ ಎಂದು ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಶಿವಕುಮಾರ್, ಶಶಿಕಲಾ, ಸಿದ್ದರಾಮಣ್ಣ, ಉಮೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.