ಲಾಕ್ ಡೌನ್: ಸಂಕಷ್ಟದಲ್ಲಿ ಚಿತ್ರದುರ್ಗದ ಈರುಳ್ಳಿ ಬೆಳೆಗಾರರು
ಚಿತ್ರದುರ್ಗ, ಏಪ್ರಿಲ್ 28: ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದ ಸಾವಿರಾರು ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ರೈತರು ಬೆಳೆದ ಬೆಳೆಗಳು ಸರಿಯಾದ ಸಮಯಕ್ಕೆ ಸರಕು ಸಾಗಣೆ ಆಗುತ್ತಿಲ್ಲ, ಇದರಿಂದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ.
Recommended Video
ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಚಳ್ಳಕೆರೆ ತಾಲೂಕಿನಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆದಿದ್ದು, ಈರುಳ್ಳಿ ಬೆಳೆಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಇಲ್ಲದಂತಾಗಿದ್ದರ ಪರಿಣಾಮವಾಗಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಲಾಕ್ ಡೌನ್ ಗೆ ಮುಂಚೆ ಕ್ವಿಂಟಾಲ್ ಗೆ 2,500 ರೂ. ಇದ್ದ ಈರುಳ್ಳಿ, ಈಗ ಕೇವಲ 400 ರಿಂದ 1000 ರುಪಾಯಿ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಈರುಳ್ಳಿಗೆ ಮಾರುಕಟ್ಟೆ ಒದಗಿಸಬೇಕು ಹಾಗೂ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಮಹಿಳೆಯೊಬ್ಬರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊರೊನಾ ವೈರಸ್ ನಿಂದ ಖರೀದಿದಾರರು ಇಲ್ಲದ್ದರಿಂದ ಈರುಳ್ಳಿ ಬೆಲೆ ಕುಸಿತ ಕಂಡಿದೆ. ಮೊತ್ತೊಂದು ಕಡೆ ಕೊರೊನಾ ಅಟ್ಟಹಾಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕೂಡ ನಲುಗಿಹೋಗಿದೆ.
ಕಳೆದ 6-7 ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಅದೇ ನಿರೀಕ್ಷೆ ಇಟ್ಟುಕೊಂಡು ಮತ್ತೆ ಲಕ್ಷಾಂತರ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ರೈತನಿಗೆ ಕೋವಿಡ್-19 ಹೊಡೆತ ಕೊಟ್ಟಿದೆ. ಲಾಕ್ ಡೌನ್ ಪರಿಣಾಮವಾಗಿ ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದು, ರೈತರು ಬೆಳೆದ ಈರುಳ್ಳಿ ಚೀಲಗಳನ್ನು ಹೊಲ, ಮನೆ, ಶೇಡ್ ಗಳಲ್ಲಿ ಶೇಖರಣೆ ಮಾಡಿ ರೈತರು ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಒಂದು ಕೆ.ಜಿ ಈರುಳ್ಳಿ ಬೀಜದ ಬೆಲೆ 1200 ರಿಂದ 2000 ವರೆಗೂ ಇದ್ದು, ಒಂದು ಈರುಳ್ಳಿ ಚೀಲಕ್ಕೆ 45, ಒಂದು ಪ್ಯಾಕೆಟ್ ಈರುಳ್ಳಿ ಕೊಯ್ಯಲು 25-30, ಮೂರು ಬಾರಿ ಕಳೆ, ಗೊಬ್ಬರ, ಇತರೆ ಖರ್ಚು ಗಳು ಸೇರಿ ಒಂದು ಪ್ಯಾಕೆಟ್ ಈರುಳ್ಳಿ ಬೆಳೆಯಲು 500-1000 ರೂಪಾಯಿ ವರೆಗೂ ಖರ್ಚು ಬರುತ್ತದೆ.
ಇಂತಹದರಲ್ಲಿ ಒಂದು ಪ್ಯಾಕೆಟ್ ಈರುಳ್ಳಿ ಬೆಲೆ 200-500 ಗೆ ಮಾರಾಟ ಮಾಡುವ ಸ್ಥಿತಿ ತಲುಪಿದೆ. ಒಟ್ಟಾರೆಯಾಗಿ ಚಿತ್ರದುರ್ಗದಲ್ಲಿ ಸಾಕಷ್ಟು ಈರುಳ್ಳಿ ಬೆಳೆದಿರುವ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.