ಮುಗಿಯದ ಭದ್ರಾ ಕಾಮಗಾರಿ; ಅಧಿಕಾರಿಗಳಿಗೆ ರೈತರಿಂದ ತರಾಟೆ
ಹಿರಿಯೂರು, ಆಗಸ್ಟ್ 15: "ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಹಿರಿಯೂರು ವಿವಿ ಸಾಗರಕ್ಕೆ ನೀರು ಹರಿಸುವ ಕುರಿತು ದಿನಕ್ಕೊಂದು ಹೇಳಿಕೆ ನೀಡಿ ನಮ್ಮನ್ನು ನಿರಂತವಾಗಿ ದಿಕ್ಕು ತಪ್ಪಿಸುತ್ತಿದ್ದೀರಿ" ಎಂದು ಹಿರಿಯೂರು ರೈತರು ಭದ್ರಾ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಭದ್ರಾ ಕಾಮಗಾರಿ ವೀಕ್ಷಿಸಲು ಶಾಸಕಿ ಕೆ. ಪೂರ್ಣಿಮಾ ಹಾಗೂ ವಿವಿ ಸಾಗರ ಹೋರಾಟ ಸಮಿತಿಯವರು ಭೇಟಿ ನೀಡಿದ್ದು, ಈ ಸಂದರ್ಭ ರೈತರು ಕೂಡ ಅಲ್ಲಿಗೆ ಬಂದಿದ್ದರು. ಶಾಸಕರು ಮತ್ತು ರೈತರು ಕಾಮಗಾರಿ ವೀಕ್ಷಣೆಗೆ ಬಂದಿದ್ದ ವಿಷಯ ತಿಳಿದು ಸ್ಥಳಕ್ಕೆ ಬಂದ ಭದ್ರಾ ಇಂಜಿನಿಯರ್ ಜಗದೀಶ್ ಅವರೊಂದಿಗೆ ರೈತರು ವಾಗ್ವಾದಕ್ಕಿಳಿದರು.
ವಿವಿ ಸಾಗರಕ್ಕೆ ಆಗಸ್ಟ್ನಲ್ಲಿ ಹರಿಯುವುದೇ ನೀರು?
"ಈ ತಿಂಗಳ 10ಕ್ಕೆ ನೀರು ಕೊಡ್ತೀವಿ, ಕಾಮಗಾರಿ ಮುಗಿಯುತ್ತದೆ, ಯಾವುದೇ ಕಾರಣಕ್ಕೂ ನೀರು ನಿಲ್ಲಿಸುವುದಿಲ್ಲ, ವಿವಿ ಸಾಗರಕ್ಕೆ ನೀರು ಹರಿಸಲಾಗುವುದು ಎಂದು ಹೇಳಿದ್ದಿರಿ. ಆದರೆ ಕಾಮಗಾರಿ ಕೆಲಸ ಇನ್ನೂ ಬಾಕಿ ಇದೆ. 18 ಸಾವಿರ ಕೋಟಿ ಯೋಜನೆಗೆ ಕೇವಲ ನಾಲ್ಕೈದು ಜನ ಕೆಲಸ ಮಾಡುತ್ತಿದ್ದೀರ, ನಿಮ್ಮ ಕೈಯಲ್ಲಿ ಕೆಲಸ ಆಗಲ್ಲ ಎಂದರೆ ಹೇಳಿ, ನಮಗೆ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಗೊತ್ತಿದೆ" ಎಂದು ರೈತರು ಅಧಿಕಾರಿಗೆ ಪ್ರಶ್ನಿಸಿದರು.
ಶಾಸಕಿ ಪೂರ್ಣಿಮಾ ಅವರಿಗೆ, ವಾರದಲ್ಲಿ ಕಾಮಗಾರಿ ಮುಗಿಸುತ್ತೇವೆಂದು ಇಂಜಿನಿಯರ್ ತಿಳಿಸಿದರು. ಕಾಮಗಾರಿ ವೀಕ್ಷಿಸಿದ ಶಾಸಕರು ಸ್ಥಳದಲ್ಲಿಯೇ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ಎಂಡಿ ಲಕ್ಷಣರಾವ್ ಪೇಶ್ವೆ ಜೊತೆ ದೂರವಾಣಿ ಮೂಲಕ ಕರೆ ಮಾಡಿ ಕಾಮಗಾರಿ ಇನ್ನೂ ವಿಳಂಬವಾಗುತ್ತಿರುವುದರ ಕುರಿತು ಪ್ರಶ್ನಿಸಿದರು.
ಆಗಸ್ಟ್ 10ರೊಳಗೆ ವಿವಿ ಸಾಗರಕ್ಕೆ ನೀರು ಬರದಿದ್ರೆ ರಾಜೀನಾಮೆ: ವೆಂಕಟರಮಣಪ್ಪ
"ಇದು 18 ಸಾವಿರ ಕೋಟಿಯ ಯೋಜನೆಯಾಗಿದ್ದು, 2008ರಲ್ಲಿ ಪ್ರಾರಂಭವಾಗಿ ಸುಮಾರು 11 ವರ್ಷಗಳು ಕಳೆದಿವೆ. ಆದರೆ ಇನ್ನೂ ಕಾಮಗಾರಿ ಮುಗಿದಿಲ್ಲ. ಈ ಯೋಜನೆಯನ್ನು ಇನ್ನೂ ವಿಳಂಬ ಮಾಡಿದರೆ ರೈಲ್ವೆ ಹಳಿ ಬಂದ್ ಮಾಡಬೇಕಾಗುತ್ತದೆ" ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.