ಬಿಸಿಲುನಾಡಿಗೆ ಬಂತು ಶುಂಠಿ, ಲಾಭದ ನಿರೀಕ್ಷೆಯಲ್ಲಿ ರೈತ!
ಚಿತ್ರದುರ್ಗ, ಸೆಪ್ಟೆಂಬರ್ 01; ಮಧ್ಯ ಕರ್ನಾಟಕದ ಬಯಲುಸೀಮೆ ಎಂದು ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದಲ್ಲಿ ಸಾಮಾನ್ಯವಾಗಿ ರಾಗಿ, ಮೆಕ್ಕೆಜೋಳ, ಶೇಂಗಾ, ಈರುಳ್ಳಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬೆಳೆಯುವುದು ಕಂಡುಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಕದ ಜಿಲ್ಲೆಯಿಂದ ಬಂದ ರೈತನೊಬ್ಬ ಮಲೆನಾಡಿನಲ್ಲಿ ಬೆಳೆಯಬಹುದಾದ ಶುಂಠಿಯನ್ನು ಬಯಲುಸೀಮೆಯಲ್ಲೂ ಕೂಡ ಬೆಳೆದು ಲಕ್ಷಾಂತರ ರೂಪಾಯಿ ಲಾಭಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾನೆ.
ಕೇರಳದ ಎರ್ನಾಕುಲಂನ ಸಿ. ಪಿ. ಜಾರ್ಜ್ 1973ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ 5 ವರ್ಷಗಳ ಹಿಂದೆಯಷ್ಟೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿಗೆ ಬಂದು ಸುಮಾರು 80 ಎಕರೆ ಜಮೀನು ಖರೀದಿಸಿ "ಜಾರ್ಜ್ ಎಸ್ಟೇಟ್" ಆಗಿ ಮಾಡಿಕೊಂಡು ಕೇರಳದ ತೋಟಗಾರಿಕೆ ಬೆಳೆಗಳ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.
ನರೇಗಾ ಯೋಜನೆಯಡಿ ಪಪ್ಪಾಯ ಬೆಳೆದು ಲಾಭ ಪಡೆದ ರೈತ
ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರದ ಪಿ. ಪಿ. ಸಿಜು ಎಂಬ ರೈತನ ಕುಟುಂಬದ ಪರಿಚಯವಿದೆ. ಇವರಿಬ್ಬರೂ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಹಾಸನ ಭಾಗಗಳಲ್ಲಿ ಹೆಚ್ಚಾಗಿ ಶುಂಠಿ ಬೆಳೆಯುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಯಾರೂ ಸಹ ಶುಂಠಿ ಬೆಳೆದಿಲ್ಲ. ನಾವು ಏಕೆ ಇಲ್ಲೊಮ್ಮೆ ಶುಂಠಿ ಬೆಳೆಯಬಾರದು ಎಂಬ ಹಂಬಲವಿತ್ತು.
ಕಬ್ಬಿನ ನಾಡಲ್ಲಿ 110 ಟನ್ ಬಾಳೆ ಬೆಳೆದು ಲಾಭಗಳಿಸಿದ ರೈತ!
ಹಾಗಾಗಿ ಜಾರ್ಜ್ ಸಿಜು ಎಂಬುವವರಿಗೆ ಮೇಟಿಕುರ್ಕೆ ಸಮೀಪ ಇರುವ 12 ಎಕರೆ ಭೂಮಿಯನ್ನು ಉಚಿತವಾಗಿ ಗುತ್ತಿಗೆ ನೀಡಿದ್ದು, ಗುತ್ತಿಗೆ ಪಡೆದ ಜಮೀನಿನಲ್ಲಿ ಸಿಜು ಮೂರು ತಿಂಗಳ ಹಿಂದೆ ಶುಂಠಿ ನಾಟಿ ಮಾಡಿದ್ದಾರೆ. ಹೊಸ ಪ್ರಯೋಗದ ಬಗ್ಗೆ ಮಾಹಿತಿ ಪಡೆಯಲು ಸ್ಥಳಕ್ಕೆ ಭೇಟಿ ನೀಡಿದ್ದ ಒನ್ ಇಂಡಿಯಾ ಕನ್ನಡ ಪ್ರತಿನಿಧಿ ಜೊತೆ ವಿವರವನ್ನು ಹಂಚಿಕೊಂಡರು...
2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ
7 ಜನ ಪಾಲುದಾರರು
"ನಾವು ಏಳು ಜನ ಪಾಲುದಾರರಿದ್ದು, ಎನ್. ಆರ್. ಪುರದಲ್ಲಿ ಶುಂಠಿ, ಸುವರ್ಣಗೆಡ್ಡೆ, ಅರಿಶಿಣ, ಕಾಳುಮೆಣಸು ಒಳಗೊಂಡಂತೆ ಮಲೆನಾಡಿನ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಜಾರ್ಜ್ ನಮ್ಮ ಕುಟುಂಬ ಸ್ನೇಹಿತರು. ಹಿರಿಯೂರು ತಾಲ್ಲೂಕಿನಲ್ಲಿ ಅವರ ಜಮೀನಿನಲ್ಲಿ ಶುಂಠಿಯನ್ನು ಏಕೆ ಬೆಳೆಯಬಾರದು ಎಂಬ ಯೋಚನೆ ಬಂತು. ಸ್ಥಳೀಯರು ಇಲ್ಲಿನ ವಾತಾವರಣಕ್ಕೆ ಶುಂಠಿ ಬರುವುದಿಲ್ಲ, ಸುಮ್ಮನೆ ನಷ್ಟ ಮಾಡಿಕೊಳ್ಳುತ್ತೀರಿ, ಎಂದು ಹೇಳಿದ್ದರು. ಉಷ್ಣಾಂಶ 35 ಡಿಗ್ರಿಗಿಂತ ಹೆಚ್ಚಿದ್ದರೆ ಶುಂಠಿ ಬರುವುದಿಲ್ಲ. ಇಲ್ಲಿ ಅದಕ್ಕಿಂತ ಹೆಚ್ಚು ಉಷ್ಣಾಂಶ ಇರುವುದಿಲ್ಲ. ಜೊತೆಗೆ ಕಪ್ಪು ಭೂಮಿಯಲ್ಲಿ ಉತ್ಕೃಷ್ಟವಾಗಿ ಬರಬಹುದು ಎಂದು ಶುಂಠಿ ಬೆಳೆಯಲು ನಾವು ಮುಂದಾದೆವು" ಎಂದರು.
ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ
"ಎನ್. ಆರ್. ಪುರದಿಂದ ಹಿಮಾಚಲ ಮತ್ತು ಮಾರಂ ತಳಿಯ ರೋಗ ರಹಿತ ಬೀಜ ತಂದು, (ರಿಗೋಡಿ ಎಂಬ ಮತ್ತೊಂದು ತಳಿ ಇದ್ದು, ನಾರು ಇರುವುದಿಲ್ಲ, ಔಷಧಿಗೆ ಮಾತ್ರ ಬಳಕೆಯಾಗುತ್ತದೆ) ಒಂದು ತಿಂಗಳು ಬೀಜೋಪಚಾರ ಮಾಡಿದ್ದೇವೆ. ಒಂದು ಕೆಜಿ ಬೀಜದಲ್ಲಿ 10-12 ಗಿಡ ಮಾಡಬಹುದು. ಪ್ರತಿ ಕೆಜಿಗೆ 36 ರೂಪಾಯಿ (ನಿತ್ಯ ಬಳಕೆಗೆ ಬಳಸುವ ಶುಂಠಿಗಿಂತ ಕೆಜಿಗೆ 10 ರೂಪಾಯಿ ಹೆಚ್ಚಿನ ದರ) ದರವಿದೆ. ಒಂದು ಎಕರೆಗೆ 6 ಕ್ವಿಂಟಾಲ್ ಬೀಜ ಬೇಕಾಗುತ್ತದೆ. 11 ತಿಂಗಳಿಗೆ ಕೊಯ್ಲಿಗೆ ಬರುತ್ತದೆ. ಒಂದು ಚೀಲಕ್ಕೆ 60 ಕೆಜಿ ತೂಕ ಇರುತ್ತದೆ. ಒಂದು ಎಕರೆಯಲ್ಲಿ 200 ಚೀಲ ಇಳುವರಿ ಬರುತ್ತದೆ" ಎಂದು ಸಿಜು ತಿಳಿಸಿದರು. ಇದೀಗ ಬೆಳೆ ಉತ್ತಮ ಇಳುವರಿ ಬರುತ್ತಿರುವ ಕಾರಣ ಶುಂಠಿಯಲ್ಲಿ ಲಕ್ಷ ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.
'‘ನಮ್ಮ ಮಲೆನಾಡಿನಲ್ಲಿ ಶುಂಠಿ ಹೆಚ್ಚು ಬೆಳೆಯುತ್ತವೆ. ಆದರೆ ಅಲ್ಲಿನ ಬೆಳೆಗೆ ಹೆಚ್ಚಾಗಿ ರೋಗ ಕಾಣಿಸಿಕೊಳ್ಳುತ್ತದೆ. ಚಿತ್ರದುರ್ಗ ಭಾಗದ ಹೊಸದುರ್ಗ, ಹಿರಿಯೂರು ಭಾಗದಲ್ಲಿ ಶುಂಠಿ ಬೆಳೆಯಬೇಕು ಎಂಬ ನಿರೀಕ್ಷೆ ಇತ್ತು. ಅದರಂತೆ ಹಿರಿಯೂರಿನ ಮೇಟಿಕುರ್ಕೆ - ಸೂರಗೊಂಡನಹಳ್ಳಿ ಮಧ್ಯಭಾಗದಲ್ಲಿ ಶುಂಠಿ ಬೆಳೆಯುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ" ಎಂದು ವಿವರಣೆ ನೀಡಿದರು.
ಮುಂಬೈ, ಪುಣೆ ಪ್ರಮುಖ ಮಾರುಕಟ್ಟೆ
"ಈ ಭಾಗದಲ್ಲಿ ಹೊಸ ಬೆಳೆಯಾಗಿರುವ ಕಾರಣಕ್ಕೆ ರೋಗ ಇರುವುದಿಲ್ಲ. ಆದರೂ ಕಟಾವಿನ ಒಳಗೆ ನಾಲ್ಕು ಬಾರಿ ಔಷಧಿ ಸಿಂಪರಣೆ, ನಾಲ್ಕು ಬಾರಿ ಗೊಬ್ಬರ ಕೊಡಬೇಕು. ಮಲೆನಾಡಿಗೆ ಹೋಲಿಸಿದಲ್ಲಿ ಈ ಭಾಗದಲ್ಲಿ ಇಳುವರಿ ಕಡಿಮೆ. ಆದರೆ ಬಣ್ಣ ಹಾಗೂ ಗುಣಮಟ್ಟ ಉತ್ತಮವಾಗಿರುತ್ತದೆ. ಹಿಮಾಚಲ ಶುಂಠಿ ಅಡುಗೆ ಮತ್ತು ಔಷಧಿ ತಯಾರಿಕೆಗೆ ಹೆಚ್ಚು ಬಳಕೆಯಾಗುತ್ತದೆ. ಒಣಶುಂಠಿಯನ್ನಾಗಿಯೂ ಬಳಸಬಹುದು. ದೆಹಲಿಯಲ್ಲಿ ಶುಂಠಿಗೆ ಹೆಚ್ಚು ಬೇಡಿಕೆ. ಪೂಣೆ, ಮುಂಬೈ ಪ್ರಮುಖ ಮಾರುಕಟ್ಟೆಗಳು" ಎಂದು ಸಿಜು ಹೇಳಿದರು.
"ಈ ಭಾಗದಲ್ಲಿ ಬೆಳೆ ಚೆನ್ನಾಗಿ ಬಂದಿದೆ ತೊಂದರೆ ಇಲ್ಲ, ಸ್ವಲ್ಪ ಬಿಸಿಲು ಜಾಸ್ತಿ ಇದೆ. ಪರವಾಗಿಲ್ಲ ನಡೆಯುತ್ತದೆ. ಎರಡು ಭಾಗದಲ್ಲಿ ವ್ಯತ್ಯಾಸ ಗಮನಿಸಿದರೆ ಅಲ್ಲಿ ಖರ್ಚು ಜಾಸ್ತಿ ಬರುತ್ತೆ, ಇಲ್ಲಿ ಸ್ವಲ್ಪ ಕಡಿಮೆ ಖರ್ಚು ಬರುತ್ತದೆ. ಮಲೆನಾಡು ಭಾಗದಲ್ಲಿ ರೋಗ ಹೆಚ್ಚಾಗಿ ಕಂಡುಬರುವ ಹಿನ್ನೆಲೆಯಲ್ಲಿ 10 ಎಕರೆಯಲ್ಲಿ ನಾಟಿ ಮಾಡಿದರೆ ಎರಡರಿಂದ ಮೂರು ಎಕರೆಯಲ್ಲಿ ಮಾತ್ರ ಬೆಳೆ ಚೆನ್ನಾಗಿ ಬರುತ್ತದೆ.ಇಲ್ಲಿ 12 ಎಕರೆಯಲ್ಲಿ ಶುಂಠಿ ಹಾಕಿದ್ದೆವೆ. ನಾಟಿ ಮಾಡಿರುವ ಎಲ್ಲ ಬೆಳೆಯು ಚೆನ್ನಾಗಿದೆ. ಒಂದು ಎಕರೆಗೆ 2-3 ಲಕ್ಷ ರೂಪಾಯಿ ಖರ್ಚು ಬರುತ್ತದೆ, ಇಳುವರಿ ಮಾತ್ರ ಸ್ವಲ್ಪ ಕಡಿಮೆ ಆಗಬಹುದು. ಇಲ್ಲಿ ಉಪ್ಪು ನೀರು ಹೆಚ್ಚಿದೆ. ಸಿಹಿ ನೀರು ಇದ್ರೆ ಶುಂಠಿ ಬೆಳೆಯಬಹುದು. ಈ ಬೆಳೆಗೆ ಸಿಹಿ ನೀರು ತುಂಬಾ ಬೇಕಾಗುತ್ತದೆ" ಎಂದರು.
ಕೊರೊನಾ ಸಂದರ್ಭದಲ್ಲಿ ಬೇಡಿಕೆ
"ಮಹಾಮಾರಿ ಕೋವಿಡ್ -19 ನಿಂದ ಶುಂಠಿ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡೆದಿದೆ. ಕೊರೊನಾ ಸಂದರ್ಭದಲ್ಲಿ ಶುಂಠಿ ಕಷಾಯ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಬೇಡಿಕೆ ಬಂದಿತು. ಒಣಶುಂಠಿ ಬೆಲೆ ಕೆಜಿಗೆ 100-150 ರೂಪಾಯಿ ಇದ್ದದ್ದು, 300 ರೂಪಾಯಿಗೆ ಹೆಚ್ಚಿತು. ಪ್ರತಿ ಎಕರೆಗೆ 200-250 ಚೀಲ (60 ಕೆಜಿ ತೂಕದ್ದು) ಇಳುವರಿ ಬರಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 2600 ರೂಪಾಯಿ ದರವಿದೆ. ಈ ಭಾಗದಲ್ಲಿ ನಿರ್ವಹಣಾ ವೆಚ್ಚ ಕಡಿಮೆ. ಕಳೆಯೂ ಕಡಿಮೆ. ತುಂತುರು ನೀರಾವರಿ ಅಳವಡಿಸಿರುವ ಕಾರಣ ಹೆಚ್ಚು ನೀರಿನ ಅಗತ್ಯವಿಲ್ಲ" ಎಂದು ಸಿಜು ವಿವರಿಸಿದರು.
"ಇಲ್ಲಿ ಶುಂಠಿ ಬೆಳೆಯಲು ಬಂದಾಗ ಅಕ್ಕಪಕ್ಕದವರು ಇಲ್ಲಿ ಬರಲ್ಲ ಎಂದಿದ್ದರು. ಆದರೂ ಒಂದು ಕಡೆ ನಮಗೆ ಅನುಮಾನ ಇತ್ತು. ಚಿಕ್ಕಮಗಳೂರು ಭಾಗದಲ್ಲಿ ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡುತ್ತೇವೆ, ಈ ಭಾಗದಲ್ಲಿ ಸ್ವಲ್ಪ ತಡವಾಗಿ ಅಂದರೆ ಮೇ ತಿಂಗಳಿನಲ್ಲಿ ಬಿಸಿಲಿನ ತಾಪ ಕಡಿಮೆ ಇರುತ್ತದೆ. ಆಗ ನಾಟಿ ಮಾಡಿದರೆ ಬೆಳೆ ಬರುತ್ತದೆ. ಈ ಬೆಳೆಯಲ್ಲಿ ನಾವು ಯಶಸ್ಸು ಸಾಧಿಸಿದರೆ ಮುಂದಿನ ವರ್ಷ 25 ಎಕರೆಯಲ್ಲಿ ಶುಂಠಿ ಬೆಳೆಯುವ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲೂ ಶುಂಠಿ ಬೆಳೆಯಬಹುದು ಎಂದು ತೋರಿಸುತ್ತೇವೆ" ಎನ್ನುತ್ತಾರೆ ರೈತ ಸೀಜು.
Recommended Video
ಬೇರೆ ಬೆಳೆಗಳ ಪ್ರಯೋಗ
"ಶುಂಠಿ ಬೆಳೆಯ ಬಗ್ಗೆ ಸಾಕಷ್ಟು ರೈತರು ಮಾಹಿತಿ ಕೇಳುತ್ತಿದ್ದಾರೆ. ಮೊದಲ ಕಟಾವು ಆಗುವವರೆಗೆ ಖಚಿತವಾಗಿ ಹೇಳಲು ಆಗದು. ಪ್ರಸ್ತುತ ಮೂರು ತಿಂಗಳ ಅವಧಿಯ ಬೆಳೆ ನೋಡಿದಾಗ ನಮ್ಮ ಬಂಡವಾಳಕ್ಕೆ ಮೋಸವಾಗದು ಎಂಬ ವಿಶ್ವಾಸವಿದೆ. ಇದರಲ್ಲಿ ಯಶಸ್ವಿಯಾದರೆ ಕೇರಳ ಮತ್ತು ನಮ್ಮ ಮಲೆನಾಡಿನಲ್ಲಿ ಬೆಳೆಯುವ ಬೆಳೆಗಳ ಪ್ರಯೋಗ ಮಾಡುವ ಉದ್ದೇಶವಿದೆ" ಎಂದು ಸಿಜು ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸೇಬು, ಡ್ರಾಗನ್ ಫ್ರೂಟ್, ಗೋಡಂಬಿ, ಈಗೆ ಹತ್ತಾರು ಬಗೆಯ ಹೊಸ ಹೊಸ ಬೆಳೆಗಳ ಸಾಲಿನಲ್ಲಿ ಶುಂಠಿ ಬೆಳೆಯು ಸೇರಿಕೊಂಡಿದೆ. ಮುಂದಿನ ದಿನಗಳಲ್ಲಿ ರೈತರು ಜಿಲ್ಲೆಯಲ್ಲಿ ಇನ್ನೂ ಯಾವ ಯಾವ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ ಕಾದು ನೋಡಬೇಕಿದೆ.