ಚಿತ್ರದುರ್ಗ; ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ಚಿತ್ರದುರ್ಗ, ಜೂನ್ 4: ಗ್ರಾಮ ಪಂಚಾಯ್ತಿ ಅಧಿಕಾರಿಗಳು ಖಾಲಿ ನಿವೇಶನದ ಇಸ್ವತ್ತು ಮಾಡಿಕೊಟ್ಟಿಲ್ಲವೆಂದು ಮನನೊಂದು ವ್ಯಕ್ತಿಯೊಬ್ಬರು ತನ್ನ ಪತ್ನಿ, ಮೂವರು ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ನೆಹರು ಸರ್ಕಲ್ ನಲ್ಲಿ ನಡೆದಿದೆ.
ಬಾಗಲೂರು ಬಳಿ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಟೆಕ್ಕಿ ಆತ್ಮಹತ್ಯೆ
ದೊಡ್ಡೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೊಮ್ಮಸಮುದ್ರ ಗ್ರಾಮದ ಮಂಜುನಾಥ್ ಅವರು ತಮ್ಮ ತಂದೆ ನಿಂಗಪ್ಪನವರ ಹೆಸರಿನಲ್ಲಿರುವ ಖಾಲಿ ನಿವೇಶನದ ಜಾಗವನ್ನು ತಮ್ಮ ಹೆಸರಿಗೆ ಇಸ್ವತ್ತು ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ಆರು ತಿಂಗಳಿಂದ ಕೆಲಸ ಮಾಡಿಕೊಡದೇ ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದು, ಪದೇ ಪದೇ ಪಂಚಾಯ್ತಿ ಕಚೇರಿಗೆ ಅಲೆದಾಡಿಸುತ್ತಿರುವುದರಿಂದ ಬೇಸತ್ತು ಆತ್ಮಹತ್ಯೆ ಪ್ರಯತ್ನ ಮಾಡಿರುವುದಾಗಿ ತಿಳಿದುಬಂದಿದೆ.
ಅಲ್ಲದೆ ತಮ್ಮ ಸ್ವಗ್ರಾಮದಲ್ಲೂ ಜಾಗದ ವಿಚಾರದಲ್ಲಿ ನಮ್ಮ ಕುಟುಂಬದ ಮೇಲೆ ದೌರ್ಜನ್ಯವಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹಾಗು ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತಮಗಾದ ಅನ್ಯಾಯ ಮತ್ತೆ ಯಾರಿಗೂ ಆಗುವುದು ಬೇಡವೆಂದು ಹೀಗೆ ಆತ್ಮಹತ್ಯೆಗೆ ಯತ್ನಿಸಿದ್ದೇವೆಂದು ಮಂಜುನಾಥ್ ತಿಳಿಸಿದ್ದಾರೆ. ಮಂಜುನಾಥ್ ತಮ್ಮ ಮೂವರು ಮಕ್ಕಳ ಸಹಿತ ಪತ್ನಿ ಶಿಲ್ಪಾಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ನಿನ್ನೆ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಸ್ಥಳೀಯರು ನೆರವಿಗೆ ಧಾವಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.