ಹಿರಿಯೂರು ಕೋವಿಡ್ ಸೆಂಟರ್ನಲ್ಲಿ ಸೋಂಕಿತರಿಗಾಗಿ ವ್ಯಾಯಾಮ ಮತ್ತು ಡ್ಯಾನ್ಸ್
ಚಿತ್ರದುರ್ಗ, ಜೂನ್ 1: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋವಿಡ್ ಕೇರ್ ಸೆಂಟರ್ನಲ್ಲಿ ಕ್ವಾರಂಟೈನ್ ಆಗಿರುವ ಸೋಂಕಿತರಿಗೆ ಬೆಳ್ಳಂಬೆಳಿಗ್ಗೆಯೇ ವ್ಯಾಯಾಮ, ಯೋಗಾಸನ ಮತ್ತು ಡ್ಯಾನ್ಸ್ ಮಾಡಿಸಲಾಯಿತು.
ಕೋವಿಡ್ ಸೋಂಕಿತರಿಗೆ ಈ ಮೂಲಕ ಆತ್ಮವಿಶ್ವಾಸ ತುಂಬಿಸುವ ಕೆಲಸವನ್ನು ಜೆ.ಜಿ ಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ದೇವರಕೊಟ್ಟ ಕೋವಿಡ್ ಕೇರ್ ಕೇಂದ್ರದಲ್ಲಿ ಮಂಗಳವಾರ ಮುಂಜಾನೆ ನಡೆಸಲಾಗಿದೆ.
ಕೊರೊನಾ ಸೋಂಕು ಧೃಢಪಟ್ಟವರನ್ನು ಕೋವಿಡ್ ಸೆಂಟರ್ನಲ್ಲಿ ಹೊರಗಡೆ ಬರದಂತೆ ರೂಂನಲ್ಲಿ ಇರಿಸಿದ್ದರು. ಸೋಂಕಿತರು ಭಯಪಡಬಾರದು ಹಾಗೂ ಕೆಲವು ದಿನಗಳಿಂದ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬೇಸತ್ತಿರುವ ಸೋಂಕಿತರ ಮನಸ್ಸಿಗೆ ಆನಂದ, ಉತ್ಸಾಹ ನೀಡುವ ಸಲುವಾಗಿ ಇದರ ಜೊತೆಗೆ ಕೋವಿಡ್ ಭಯದಿಂದ ಹೊರ ಬರಲು ಪ್ರೇರಣೆ ನೀಡುವ ಮೂಲಕ ವೈದ್ಯರು ಈ ಕಾರ್ಯಕ್ರಮ ಆಯೋಜಿಸಿದ್ದರು.
ಜೆ.ಜಿ ಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ "ನಾಗಿನಿ.. ನಾಗಿನಿ' ಹಾಡಿಗೆ ಕೋವಿಡ್ ಸೋಂಕಿತರು ನೃತ್ಯ ಮಾಡಿದರು. ಸೋಂಕಿತರ ಜೊತೆಯಲ್ಲಿ ವೈದ್ಯೆ ಡಾ.ಶೃತಿ ಕೂಡ ಸ್ಟೆಪ್ ಹಾಕಿ ರಂಜಿಸಿದರು. ನೃತ್ಯದ ಜೊತೆ ವ್ಯಾಯಾಮ, ಯೋಗಾಸನ ಮಾಡಿಸುವ ಮೂಲಕ ಮನೋಸ್ಥೈರ್ಯ ಹೆಚ್ಚಿಸುವ ಪ್ರಯೋಗ ಮಾಡಿದ್ದಾರೆ. ಡಾ .ಶೃತಿ, ಡಾ.ಪ್ರಶಾಂತ್, ಡಾ.ಕುಮಾರಸ್ವಾಮಿ, ಡಾ.ಶಂಕರ್ ಅವರ ಕಾರ್ಯವೈಖರಿಗೆ ಸೋಂಕಿತರ ಕುಟುಂಬದವರು ಹಾಗೂ ತಾಲ್ಲೂಕಿನ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.