ಅದಾನಿ, ಅಂಬಾನಿಗಿಂತ ಈಸ್ಟ್ ಇಂಡಿಯಾ ಕಂಪನಿ ಒಳ್ಳೆಯದಲ್ಲವೇ?: ಕೋಡಿಹಳ್ಳಿ ಚಂದ್ರಶೇಖರ್
ಚಿತ್ರದುರ್ಗ, ಅಕ್ಟೋಬರ್ 20: "ರೈತರನ್ನು ಸಂಪೂರ್ಣವಾಗಿ ನಾಶಮಾಡುವ ಹಂತಕ್ಕೆ ನೀತಿಗಳು, ಕಾನೂನುಗಳು ತಯಾರಾಗಿವೆ," ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹೊರವಲಯದ ಗ್ರೀನ್ಲ್ಯಾಂಡ್ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಳ್ಳಿಗಳಲ್ಲಿ ಇಂತಹ ಕಾನೂನುಗಳು ಬೇಡ ಎಂದು ರೈತರು ತೀರ್ಮಾನಕ್ಕೆ ಬಂದಿದ್ದು, ಹಳ್ಳಿಗಳನ್ನು ಖಾಲಿ ಮಾಡಿ, ಹೊಲ ಗದ್ದೆಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ಮಾಡಿ ಕೊಡಬೇಕು ಎಂದು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವಾಗ ರೈತರ ಪರವಾಗಿ ಸರ್ಕಾರ ಎಲ್ಲಿದೆ,'' ಎಂದು ಪ್ರಶ್ನಿಸಿದರು.
"ಇಡೀ ದೇಶವೇ ಸಂಪೂರ್ಣ ಕಂಪನೀಕರಣ ಮಾಡುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಆತುರವಾಗಿ ತೀರ್ಮಾನಗಳನ್ನು ತೆಗೆದುಕೊಂಡಿದೆ. ಈಗಾಗಲೇ ಹೆದ್ದಾರಿ ರಸ್ತೆಗಳು ಖಾಸಗಿ ವ್ಯಕ್ತಿಗಳ ಮಾಲೀಕತ್ವಕ್ಕೆ ಹೋಗಿದೆ. ಹಾಗೆಯೇ ಏರ್ಪೋರ್ಟ್, ಬಂದರು, ಎಲ್ಐಸಿ ಸೇರಿದಂತೆ ಇತ್ಯಾದಿಗಳು ಮುಂದಿನ ಹಂತದಲ್ಲಿ ಖಾಸಗಿಕರಣ ಮಾಡುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ಹೇಳಿದ್ದಾರೆ. ಬಾಹ್ಯಾಕಾಶ ಅಂತರಿಕ್ಷ ಕೂಡ ಈ ಕಂಪನಿಗಳ ಕೈಗೆ ಹೋಗುವುದಾದರೆ ಸ್ವಾತಂತ್ರ್ಯ ಪಡೆಯುವ ಉದ್ದೇಶವಾದರೂ ಏನಿತ್ತು," ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಬಿಜೆಪಿಯವರ ಈ ಧೋರಣೆ ಅತ್ಯಂತ ಅಪಾಯಕಾರಿ
"ಈಸ್ಟ್ ಇಂಡಿಯಾ ಕಂಪನಿ ಅದಾನಿ, ಅಂಬಾನಿಗಿಂತ ಒಳ್ಳೆಯದಲ್ಲವೇ?, ಈ ತರ ಜನರಿಂದ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಜನರನ್ನು ಗುಲಾಮಗಿರಿಯಲ್ಲಿ ಇಟ್ಟುಕೊಳ್ಳುವುದಾದರೆ ಇದು ಪ್ರಜಾಪ್ರಭುತ್ವನಾ? ಬಿಜೆಪಿಯವರ ಈ ಧೋರಣೆ ಅತ್ಯಂತ ಅಪಾಯಕಾರಿ," ಎಂದರು.
"ವಿರೋಧ ಪಕ್ಷಗಳು ಕೂಡ ಸಮರ್ಥವಾದ ಸ್ಥಾನ ನಿರ್ವಹಿಸುವಲ್ಲಿ ವಿಫಲವಾಗಿದೆ. ವಿಧಾನಸಭೆಯಲ್ಲಿ ರೈತರ ವಿರುದ್ಧ ಕಾಯ್ದೆಗಳನ್ನು ಪಾಸ್ ಮಾಡುತ್ತಿದ್ದಾಗ ವಿರೋಧ ಪಕ್ಷಗಳು ಏನು ಮಾಡುತ್ತಿದ್ದವು ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಕೋಡಿಹಳ್ಳಿ ಚಂದ್ರಶೇಖರ್, ಈಗಾಗಲೇ ಕೃಷಿ ಮಾರುಕಟ್ಟೆ ಶೇ.80ರಷ್ಟು ಖಾಸಗಿಕರಣವಾಗಿದೆ. ಉಳಿದಂತಹ ನೀತಿಗಳು ಕೃಷಿಗೆ ಅಪಾಯವಾಗಿದೆ. ಈ ಮೂಲಕ ಫಸಲ್ ಭಿಮಾ ಹಾಗೂ ಇತರೆ ಸಣ್ಣ ಪುಟ್ಟ ಸಹಾಯ ನೀಡುವ ಯೋಜನೆಗಳನ್ನು ನೀಡುವಲ್ಲಿ ಹಿತಾಸಕ್ತಿ ಇಲ್ಲ," ಎಂದರು.
ರೈತರಿಗೆ ಶೇ.20 ಸಬ್ಸಿಡಿ ಕೊಡುವ ಚಿಂತನೆ
"ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಸಗೀಕರಣ ಮಾಡುವ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ." ಇನ್ನು ಪೆಟ್ರೋಲ್ ಡೀಸೆಲ್ ದರದಲ್ಲಿ ರೈತರಿಗೆ ಶೇ.20 ಸಬ್ಸಿಡಿ ಕೊಡುವ ಚಿಂತನೆ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, "ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಹೇಳಿಕೆ ನೀಡಿದ್ದು, ನಿಜವಾಗಿಯೂ ಪೆಟ್ರೋಲ್, ಡೀಸೆಲ್ ಮೇಲಿನ ದರವನ್ನು ಸರ್ಕಾರ ವಾಪಸ್ ತೆಗೆದುಕೊಳ್ಳುತ್ತಾ ಎಂದು ಸರ್ಕಾರಕ್ಕೆ ಮರು ಪ್ರಶ್ನೆ ಹಾಕಿದರು. ಪ್ರತಿದಿನ ಹೀಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಿದ್ದರೆ ಜನ ರೊಚ್ಚಿಗೇಳುತ್ತಾರೆ," ಎಂದರು.
ಪೊಳ್ಳು ಮಾತುಗಳಿಗೆ ನಾನೇನು ಉತ್ತರ ಕೊಡಬೇಕಾಗಿಲ್ಲ
ಇನ್ನು ಚಿತ್ರದುರ್ಗದ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೋಡಿಹಳ್ಳಿ ಚಂದ್ರಶೇಖರ್, "ನೋಡಿ ಪೊಳ್ಳು ಮಾತುಗಳಿಗೆ ನಾನೇನು ಉತ್ತರ ಕೊಡಬೇಕಾಗಿಲ್ಲ. ಯಾರು ಆಪಾದನೆ ಮಾಡುತ್ತಾರೆ ಅವರಿಗೆ ಒಂದು ನೈತಿಕತೆ ಇರಬೇಕು. ಆಪಾದನೆಯನ್ನು ಸಾರ್ವಜನಿಕವಾಗಿ ಸಾಬೀತುಪಡಿಸಬೇಕು. ಸುಮ್ಮನೆ ಬೇರೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ನಾವು ಪ್ರಾಮಾಣಿಕವಾಗಿ ಇದ್ದೇವೆ, ನಮ್ಮ ನೈತಿಕತೆ ನೂರಕ್ಕೆ ನೂರು ಸರಿ ಇದೆ. ಸುಳ್ಳು ಮಾತನಾಡುವವರಿಗೆ ರೈತ ಸಂಘ ತೀರ್ಮಾನ ತೆಗೆದುಕೊಂಡು ಸಂಘದಿಂದ ಹೊರ ಹಾಕಲಾಗಿದೆ," ಎಂದರು.
"ರೈತ ವಿರೋಧಿ ಚಟುವಟಿಕೆಯಲ್ಲಿ ಹಾಗೂ ಪಕ್ಷ ರಾಜಕಾರಣದ ಬೆಂಬಲದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆಂದು ಗೊತ್ತಾಗಿ ಸಂಘದಿಂದ ಅವರನ್ನು ಹೊರ ಹಾಕಲಾಗಿದೆ ಎಂದು ಆರೋಪಕ್ಕೆ ಟಾಂಗ್ ನೀಡಿದರು. ಅವರು ಬೇರೊಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ."
ನಂಜುಂಡಸ್ವಾಮಿ ಸಿದ್ಧಾಂತಗಳು ಅವರಿಗೆ ಸರಿಯಾಗಿ ಅರ್ಥವಾಗಿಲ್ಲ
"ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ನಿಯಮಗಳು ಮತ್ತು ಸಿದ್ಧಾಂತಗಳು ಅವರಿಗೆ ಸರಿಯಾಗಿ ಅರ್ಥವಾಗಿಲ್ಲ. ಯಾವುದೋ ರಾಜಕೀಯ ಪುಕಾರರಿಂದ ಮಾತನಾಡುವುದನ್ನು ಕಲಿತಿದ್ದಾರೆ. ಸಂಘಟನೆಯಲ್ಲಿದ್ದಾಗ ಬಾರದ ಪ್ರಶ್ನೆಗಳು ಈಗ ಯಾಕೆ ಪ್ರಶ್ನೆಗಳು ಬರುತ್ತಿವೆ," ಎಂದು ಆರೋಪಕ್ಕೆ ಪ್ರತ್ಯಾರೋಪ ಮಾಡಿದರು.
ಕೋಡಿಹಳ್ಳಿ ಚಂದ್ರಶೇಖರ್ ರೈತರನ್ನು ದಿಕ್ಕು ತಪ್ಪಿಸಿ ದುಡ್ಡು ಮಾಡಲು ಹೊರಟಿದ್ದಾರೆ ಎಂಬ ಆರೋಪದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, "ಆರೋಪ ಮಾಡುವುದಕ್ಕೆ ಹಲವಾರು ಕಾರಣಗಳಿವೆ. ಅದಕ್ಕೆ ಪುರಾವೆಗಳಿವೆಯಾ? ಇಲ್ಲಸಲ್ಲದ ಆರೋಪಗಳಿಗೆ ನಾನು ಮೂರು ಕಾಸಿನ ಬೆಲೆ ಕೊಡುವುದಿಲ್ಲ," ಎಂದು ತಿರುಗೇಟು ನೀಡಿದರು.