ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ; ಶ್ರೀನಿವಾಸ್ ಬಿರುಸಿನ ಪ್ರಚಾರ
ಚಿತ್ರದುರ್ಗ, ಅಕ್ಟೋಬರ್ 16: ಒಂದೆಡೆ ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರಗಳ ಉಪಚುನಾವಣೆ ರಂಗೇರುತ್ತಿದ್ದರೆ, ಇತ್ತ ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಅಭ್ಯರ್ಥಿಗಳೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
5 ಜಿಲ್ಲೆಗಳ 38 ತಾಲೂಕುಗಳನ್ನೊಳಗೊಂಡ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ಇದೇ ತಿಂಗಳ 28ರಂದು ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾದ ಡಿ.ಟಿ. ಶ್ರೀನಿವಾಸ್ ಮತಯಾಚನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು, ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ, ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ ಈ ಮೂರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಣಕ್ಕೆ ಇಳಿದಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ; ಬಿಜೆಪಿ ಅಭ್ಯರ್ಥಿಗೆ ಸೋಲಿನ ಭೀತಿ
ಹೆಚ್ಚು ಮತಗಳ ಸೇರ್ಪಡೆ ಮಾಡಿಸಿದ್ದ ಶ್ರೀನಿವಾಸ್
ಹಿರಿಯೂರು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ. ಶ್ರೀನಿವಾಸ್ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಪಕ್ಷದಿಂದ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಚಿತ್ರದುರ್ಗ, ತುಮಕೂರು, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ (ಹರಿಹರದಿಂದ ಚಿಕ್ಕಬಳ್ಳಾಪುರದವರೆಗೆ) ಒಂದು ವರ್ಷ ಮತದಾರರ ಪಟ್ಟಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೆಸರು ಸೇರ್ಪಡೆ ಮಾಡಿಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದರು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮತಗಳು ಇದ್ದಿದ್ದು, ಈಗ 1 ಲಕ್ಷ 30 ಮತಗಳು ನೋಂದಣಿಯಾಗಿವೆ.
ಚುನಾವಣೆ ಘೋಷಣೆಗೆ ಮುನ್ನವೇ ತಯಾರಿ
ಹಿರಿಯೂರಿನಲ್ಲಿ 1688 ಮತಗಳಿದ್ದಿದ್ದು ಸುಮಾರು 4000 ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ಸೇರ್ಪಡೆಯಾಗಿವೆ. ಚಳ್ಳಕೆರೆ, ಶಿರಾ, ಪಾವಗಡ, ಜಗಳೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಡಿಮೆ ಇದ್ದ ಮತಗಳು ಹೆಚ್ಚಿನದಾಗಿ ನೋಂದಣಿ ಮಾಡಿಸಲು ಶ್ರೀನಿವಾಸ್ ಶ್ರಮಪಟ್ಟಿದ್ದಾರೆ. ಚುನಾವಣೆ ಘೋಷಣೆ ಆಗುವ ಮೊದಲೇ ಆಗ್ನೇಯ ಕ್ಷೇತ್ರಕ್ಕೆ ಒಳಪಡುವ ಜಿಲ್ಲೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಒಮ್ಮೆ ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಸಭೆಗಳನ್ನು ನಡೆಸಿ, ಚುನಾವಣೆಗೆ ತಯಾರಿ ಮಾಡಿಕೊಂಡಿದ್ದರು. ಹಿಂದಿನ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಈ ಚುನಾವಣೆ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡುತ್ತಾ ಬಂದಿತ್ತು.
ನಾಮಪತ್ರ ಹಿಂಪಡೆಯುವಂತೆ ಒತ್ತಡ
ಪಕ್ಷೇತರ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್ ಸ್ಪರ್ಧಿಸಿದ್ದು, ಇವರ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ ಎಂ. ಚಿದಾನಂದ ಗೌಡ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಪಕ್ಷಕ್ಕೆ ಮುಜುಗರ ಉಂಟಾಗುವ ದೃಷ್ಟಿಯಿಂದ ನಾಮಪತ್ರ ಹಿಂಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿ.ಟಿ. ರವಿ, ಡಿಸಿಎಂ ಡಾ. ಅಶ್ವಥ್ ನಾರಾಯಣ್ ನವರು ಶ್ರೀನಿವಾಸ್ ಜೊತೆ ಮಾತುಕತೆ ನಡೆಸಿ ನಾಮಪತ್ರ ಹಿಂಪಡೆಯುವಂತೆ ಸಭೆ ನಡೆಸಿದ್ದರು.
Recommended Video
ಪಟ್ಟು ಸಡಿಲಿಸದ ಶ್ರೀನಿವಾಸ್
ಆದರೆ ಈ ಒತ್ತಡಕ್ಕೆ ಪಟ್ಟು ಸಡಿಲಿಸದ ಶ್ರೀನಿವಾಸ್, ಯಾವುದೇ ಕಾರಣಕ್ಕೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ, ನನಗೆ ಟಿಕೆಟ್ ತಪ್ಪಿಸಿದ್ದು ಏಕೆ? ಒಂದು ವರ್ಷದಿಂದ ಮತದಾರರ ಹೆಸರು ಸೇರ್ಪಡೆಗೆ ಶ್ರಮಿಸಿದ್ದೇನೆ. ನಾಮಪತ್ರ ವಾಪಸ್ ಹಿಂಪಡೆಯುವುದಿಲ್ಲ. ಬದಲಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತೆನೆಂದು ಸಂಧಾನಕ್ಕೆ ಬಂದಿದ್ದ ನಾಯಕರಿಗೆ ಶ್ರೀನಿವಾಸ್ ಉತ್ತರ ನೀಡಿದ್ದಾರೆ. ಅದರಂತೆ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಲ್ಲಿ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಇವರಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.