ಚಿತ್ರದುರ್ಗದಲ್ಲಿ ಕುಡುಕರ ತಾಣವಾದ ಶುದ್ಧ ಕುಡಿಯುವ ನೀರಿನ ಘಟಕ
ಚಿತ್ರದುರ್ಗ, ಫೆಬ್ರವರಿ 20: ನಗರ ಮತ್ತು ಗ್ರಾಮೀಣ ಪ್ರದೇಶಗಳ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬರುವುದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.
ಆದರೆ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸದೇ ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ. ಈ ಚಿತ್ರಣ ಕಂಡುಬರುವುದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ.
ಚಿತ್ರದುರ್ಗದಿಂದ ಶಿರಡಿಗೆ ನೂತನ ಸರ್ಕಾರಿ ಬಸ್ ಸೇವೆ
ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸದೇ ಪಾಳು ಬಿದ್ದಿದ್ದು, ಘಟಕಕ್ಕೆ ಬೀಗ ಇಲ್ಲದೆ ಕುಡುಕರ ತಾಣವಾಗಿದೆ. ನೀರಿನ ಘಟಕದ ಕೊಠಡಿಯಲ್ಲಿ ಕುಡಿದು ಬಿಟ್ಟಿರುವ ಸಾರಾಯಿ ಬಾಟಲಿಗಳನ್ನು ಕಾಣಬಹುದಾಗಿದೆ. ಜೊತೆಗೆ ನೀರಿನ ಘಟಕದ ಬಾಗಿಲು ಸಹ ಮುರಿದು ಬಿದ್ದಿದ್ದು, ರಿಪೇರಿ ಆಗದೇ ಕುಡುಕರಿಗೊಂದು ಜಾಗ ಮಾಡಿಕೊಟ್ಟಿದೆಯೆಂಬ ಆರೋಪ ಕೇಳಿ ಬಂದಿದೆ.
ಹಿರಿಯೂರು ತಾಲೂಕಿನ ಹಲವು ಕಡೆ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸದ ನೀರಿನ ಘಟಕಗಳು ಕಂಡುಬರುತ್ತವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರತನದಿಂದ ರಿಪೇರಿ ಕೆಲಸ ಆಗದೆ ಪಾಳು ಬಿದ್ದಿವೆ ಎನ್ನಬಹುದು.
ಹೊಸದುರ್ಗ-ಬೆಂಗಳೂರು; ನೂತನ ರಾಜಹಂಸ ಬಸ್, ವೇಳಾಪಟ್ಟಿ
ಹಿರಿಯೂರು ತಾಲ್ಲೂಕು ಕಚೇರಿಯಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡು ಆರು ತಿಂಗಳು ಕಳೆದರೂ ಕಾರ್ಯ ನಿರ್ವಹಿಸುತ್ತಿಲ್ಲ. ತಾಲೂಕು ಕಚೇರಿಗೆ ಪ್ರತಿನಿತ್ಯ ನೂರಾರು ಸಾರ್ವಜನಿಕರು ಬಂದು ಹೋಗುವ ಸ್ಥಳದಲ್ಲಿ ಈ ಘಟಕ ನಿಶ್ಯಬ್ಧ ವಾಗಿರುವುದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ.
ಹಳ್ಳಿಗಳಲ್ಲಿ ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ರಿಪೇರಿ ಮಾಡುವ ಕೆಲಸ ಕೂಡ ಆಗುತ್ತಿಲ್ಲ ಎನ್ನಲಾಗಿದೆ. ಹಳ್ಳಿಗಳಲ್ಲಿ ಸ್ಥಾಪಿಸಿರುವ ನೀರಿನ ಘಟಕದ ಸುತ್ತಲೂ ಜಾಲಿಗಿಡಗಳು ಬೆಳೆದು ನಿಂತಿರುವುದನ್ನು ಕಾಣಬಹುದು. ಶುದ್ಧ ಕುಡಿಯುವ ನೀರಿಗಾಗಿ ಜನರು ಅಕ್ಕಪಕ್ಕದ ಹಳ್ಳಿಗಳಿಗೆ ಹೋಗಿ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ.
ಇದಲ್ಲದೆ ತಾಲ್ಲೂಕಿನ ಬಬ್ಬೂರು ಭೋವಿ ಕಾಲೋನಿ, ಡಿಂಡವಾರ (ಆಸ್ಪತ್ರೆ ಹತ್ತಿರ), ಬಬ್ಬೂರು ಫಾರಂ, ಹೂವಿನಹೊಳೆ ಜನತಾ ಕಾಲೋನಿ ಸೇರಿದಂತೆ ಇತರ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಘಟಕಗಳನ್ನು ರಿಪೇರಿ ಮಾಡಬೇಕಿದೆ.