ಜಪಾನ್ನಿನ ವಿಜ್ಞಾನಿ ಡಾ. ಶ್ರೀಹರಿ ಸಂಸ್ಥೆಯಿಂದ ಚಿತ್ರದುರ್ಗದ ಬಡಮಕ್ಕಳಿಗೆ ನೆರವು
ಚಿತ್ರದುರ್ಗ, ಜನವರಿ 04: ಜಪಾನ್ನಿನ ಇಕೋಸೈಕಲ್ ಕಾರ್ಪೊರೇಷನ್ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಡಾ.ಶ್ರೀಹರಿ ಚಂದ್ರಘಾಟ್ಗಿಯವರು ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಜಪಾನ್ ನಲ್ಲಿ Kibow no Hikari ಎಂಬ ಲಾಭರಹಿತ ಸಂಸ್ಥೆ ಸ್ಥಾಪಿಸಿರುವ ಶ್ರೀಹರಿ ಅವರು ಕರ್ನಾಟಕದ ಬಡಮಕ್ಕಳಿಗೆ ಆರೋಗ್ಯ ಸಂಬಂಧಿಸಿದ ನೆರವು ನೀಡಲು ಮುಂದಾಗಿದ್ದಾರೆ.
ಅಪೌಷ್ಟಿಕತೆನಿಂದ ಬಳಲುತ್ತಿರುವ ಬಡವರ್ಗದ ಮಕ್ಕಳು ಕಿವಿ ನೋವಿನಿಂದ ಬಳಲುವುದು ಕಂಡು ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಳೆಲ್ಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕುರಿತಂತೆ ಪ್ರಾಥಮಿಕ ಚಿಕಿತ್ಸೆ ನಡೆಸಲಾಗಿ 100ಕ್ಕೂ ಅಧಿಕ ಮಕ್ಕಳಿಗೆ ಶ್ರವಣ ಸಾಧನಗಳನ್ನು ನೀಡಲಾಗಿದೆ. ಆದರೆ, ಬಡಮಕ್ಕಳ ಪೋಷಕರಿಗೆ ಸುಮಾರು 20000 ರು ಗೂ ಅಧಿಕ ಮೌಲ್ಯದ ಈ ಶ್ರವಣ ಸಾಧನಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ.
ಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿ
ಡಾ. ಶ್ರೀಹರಿ ಅವರ ಕಿಬೌ ನೋ ಹಿಕರಿ ಸಂಸ್ಥೆಯು 50 ಶ್ರವಣ ಸಾಧನಗಳನ್ನು ಖರೀದಿಸಿ, ಮಕ್ಕಳಿಗೆ ದಾನ ಮಾಡುತ್ತಿದೆ. ಏಷ್ಯ ಹಾರ್ಟ್ ಫೌಂಡೇಷನ್, ನಾರಾಯಣ ಹೃದಯಾಲಯ, ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಇದಕ್ಕೆ ಸಹಯೋಗ ನೀಡಿದೆ.
ಡಾ. ಶ್ರೀಹರಿಯವರು ಭಾರತದಲ್ಲಿ ಅಂತರ್ಜಲ ನೀತಿ ರೂಪಿಸುವುದು ಅಗತ್ಯ ಎಂದು ಹೇಳಿದ್ದಾರೆ. ತೈವಾನ್, ಚೀನಾ, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಅಂತರ್ಜಲ ನೀತಿಯನ್ನು ರೂಪಿಸಲು ಅಗತ್ಯ ಸಲಹೆ ನೀಡುತ್ತಿದ್ದಾರೆ. ಇವರಿಗೆ 2017ರಲ್ಲಿ ಜಪಾನ್ನ ಪರಿಸರ ಸಚಿವಾಲಯದ ಪ್ರಶಸ್ತಿ ಸಂದಿದ್ದು, ಈ ಹೆಗ್ಗಳಿಕೆಗೆ ಪಾತ್ರರಾದ ಮೊಟ್ಟಮೊದಲ ವಿದೇಶಿ ಪ್ರಜೆ ಎನಿಸಿಕೊಂಡಿದ್ದರು. ಇದು ಜಪಾನ್ನಲ್ಲಿ ಪರಿಸರ ವಲಯದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಶಿರಸಿಯ ಪರಿಸರ ತಜ್ಞ ಡಾ.ಶ್ರೀಹರಿಗೆ ಜಪಾನ್ ಸರ್ಕಾರದ ಪ್ರಶಸ್ತಿ
ಕಳೆದ 20 ವರ್ಷಗಳಲ್ಲಿ ವಿಶ್ವದಲ್ಲಿ ಅತಿಹೆಚ್ಚು ಮಲಿನಗೊಂಡ 500ಕ್ಕೂ ಹೆಚ್ಚು ಜಲಮೂಲಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಅಳವಡಿಸಿದ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿತ್ತು. ತಮ್ಮ ಯಶಸ್ಸಿಗೆ ತಾಯಿ ಮಾಲಾಚಂದ್ರಘಾಟ್ಗಿ ಅವರೇ ಪ್ರೇರಣೆ. ಕಠಿಣ ಪರಿಶ್ರಮಕ್ಕೆ ಮತ್ತು ಸಾರ್ವಜನಿಕರಿಗೆ ಸೇವೆ ಒದಗಿಸುವಂತೆ ಸದಾ ಅವರು ಸಲಹೆ ನೀಡುತ್ತಿದ್ದರು ಎಂದು ಅವರು ಹೇಳುತ್ತಾರೆ.