ಲಸಿಕೆ ವಿಷಯದಲ್ಲಿ ಜಾತಿ ರಾಜಕಾರಣ ಬೇಡ: ಸಚಿವ ಶ್ರೀರಾಮುಲು
ಚಿತ್ರದುರ್ಗ, ಜೂನ್ 3: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ವರಸೆ ಮುಂದುವರೆದಿದ್ದು, ""ಕಾಂಗ್ರೆಸ್ ಮಾತು ಕೇಳಿದ್ರೆ ಜೀವ ಹೋಗುತ್ತದೆ ಬಿಜೆಪಿ ಮಾತು ಕೇಳಿದ್ರೆ ಜೀವ ಉಳಿಯುತ್ತದೆ'' ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಷಯದಲ್ಲಿ ಜಾತಿ ರಾಜಕಾರಣ ಸರಿಯಲ್ಲ. ಭೇದ-ಭಾವವಿಲ್ಲದೆ ಎಲ್ಲ ಜಾತಿ, ಧರ್ಮದ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಆರೋಪಕ್ಕೆ ಪ್ರತಿಕ್ರಿಯಿಸಿದರು.
"ಹರಿಪ್ರಸಾದ್ ನಿಮ್ಮ ಬುದ್ಧಿ ಬಳ್ಳತನಕ್ಕೆ ಬಳಸಿಕೊಳ್ಳಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸೋಲಿನ ಹತಾಶೆಯಿಂದ ಕೋವಿಡ್ ಸಂದರ್ಭ ಬಳಸಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ'' ಎಂದರು.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಸುತ್ತಿದ್ದಾರೆ. ಕೋವಿಡ್ ಸಂದಿಗ್ಧತೆ ವೇಳೆ ಜನರ ಜೀವದ ಜತೆ ರಾಜಕಾರಣ ಬೇಡ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಯೋಗೇಶ್ವರ್ಗೆ ಶ್ರೀರಾಮುಲು ಟಾಂಗ್
ಸಿಎಂ ಬಿ.ಎಸ್ ಯಡಿಯೂರಪ್ಪನವರು ಶಕ್ತಿ ಮೀರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದೆ. ಯಾರೋ ಸಣ್ಣಪುಟ್ಟವರು ದೆಹಲಿಗೆ ಹೋಗಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ಗೆ ಶ್ರೀರಾಮುಲು ಮಾತಿನ ಮೂಲಕ ಟಾಂಗ್ ನೀಡಿದ್ದಾರೆ.
ಲಾಕ್ಡೌನ್ನಿಂದಾಗಿ ಕೋವಿಡ್ ಸೋಂಕು ಕಡಿಮೆ ಆಗಿದೆ. ಹಂತ ಹಂತವಾಗಿ ಲಾಕ್ಡೌನ್ ಸಡಿಲೀಕರಣ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
Recommended Video