ಶೀಘ್ರವೇ ವೈದ್ಯರು ಮತ್ತು ನರ್ಸ್ ಗಳ ನೇಮಕಾತಿ: ಆರೋಗ್ಯ ಸಚಿವ ಶ್ರೀರಾಮುಲು
ಚಿತ್ರದುರ್ಗ, ಸೆಪ್ಟೆಂಬರ್ 7: ರಾಜ್ಯ ಸರ್ಕಾರದಿಂದ ಅತಿ ಶೀಘ್ರದಲ್ಲೇ ವೈದ್ಯರ ಹಾಗೂ ನರ್ಸ್ ಗಳ ನೇಮಕಾತಿ ಮಾಡಿಕೊಳ್ಳುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಚುಚ್ಚು ಮಾತಾಡಲ್ಲ; ನನ್ನನ್ನು ಕ್ಷಮಿಸಿ ಅಣ್ಣ ಎಂದು ಕೇಳಿಕೊಂಡ ಶ್ರೀರಾಮುಲು
ಮೊಳಕಾಲ್ಮೂರಿನಲ್ಲಿ ವೈರಸ್ ಲಸಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳ ಹಾಗೂ ಜಿಲ್ಲೆಯಲ್ಲಿ ಅರವಳಿಕೆ ತಜ್ಞರ ಕೊರತೆ ಕಂಡುಬಂದಿದೆ. ಶೀಘ್ರವೇ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ 4 ಮಂದಿ ಮಾತ್ರ ಅರಿವಳಿಕೆ ತಜ್ಞರಿದ್ದಾರೆ. ಚಳ್ಳಕೆರೆ ಅರಿವಳಿಕೆ ತಜ್ಞರನ್ನು ಮೂರು ದಿನ ಚಳ್ಳಕೆರೆ, ಮೂರು ದಿನ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ನಿಯೋಜಿಸುವ ಕುರಿತು ಚಿಂತಿಸಲಾಗುವುದು. 2009ರಲ್ಲಿ ಸುಧಾರಣೆ ತಂದಿದ್ದೆ, ಈಗಲೂ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸರ್ಕಾರ ಕೆಲವೇ ದಿನಗಳಲ್ಲಿ 300, 400 ವೈದ್ಯರನ್ನು ಮತ್ತು ನರ್ಸ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಿದೆ. ಈಗಾಗಲೇ ಸಿಎಂ ಜೊತೆ ಈ ಕುರಿತು ಚರ್ಚಿಸಲಾಗಿದೆ" ಎಂದು ತಿಳಿಸಿದರು.
"ಧಾರವಾಡದ ಯೋಗೇಶಗೌಡ ಅವರ ಕೊಲೆ ಕೇಸನ್ನು ಸಿಬಿಐಗೆ ನಮ್ಮ ಸರ್ಕಾರ ವಹಿಸಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ನಮ್ಮ ಸರ್ಕಾರ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಹಳೆ ಪ್ರಕರಣಗಳನ್ನು ರಾಜಕೀಯ ದುರುದ್ದೇಶದಿಂದ ಸಿಬಿಐಗೆ ವಹಿಸುತ್ತಿಲ್ಲ. ಸೂಕ್ತ ತನಿಖೆ ದೃಷ್ಟಿಯಷ್ಟೇ ಸರ್ಕಾರದ ಮುಂದಿದೆ" ಎಂದು ತಿಳಿಸಿದರು.
"ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೀಗೆ ಮಾತಾಡುತ್ತಿದ್ದಾರೆ" ಎಂದು ಹೇಳಿದರು.