ಡಿಕೆಶಿ ಧಮ್ಕಿ ರಾಜಕಾರಣ ಉತ್ತರ ಕರ್ನಾಟಕದಲ್ಲಿ ನಡೆಯಲ್ಲ: ರಾಮುಲು
Recommended Video
ಚಿತ್ರದುರ್ಗ, ಮೇ 15: ಡಿ.ಕೆ.ಶಿವಕುಮಾರ್ ಬಿಜೆಪಿ ಮುಖಂಡರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಶ್ರೀರಾಮುಲು ಅವರ ಧಮ್ಕಿ ರಾಜಕಾರಣ ಉತ್ತರ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಅಬ್ಬರಿಸಿದ್ದಾರೆ.
ಹಾನಗಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಮನಗರ, ಸಾತನೂರು, ಕನಕಪುರದಲ್ಲಿ ಧಮ್ಕಿ ರಾಜಕಾರಣ ನಡೆಯುತ್ತಿತ್ತು ಅದೇ ಸಂಪ್ರದಾಯವನ್ನು ಉತ್ತರ ಕರ್ನಾಟಕಕ್ಕೆ ತಂದಿದ್ದಾರೆ, ಆದರೆ ಧಮ್ಕಿ ರಾಜಕಾರಣ ಇಲ್ಲಿ ನಡೆಯೊಲ್ಲ ಎಂದು ಅವರು ಹೇಳಿದ್ದಾರೆ.
ನಿಮ್ಮಂತೆ ನಮಗೂ ಧಮ್ಕಿ ಹಾಕಲು ಬರುತ್ತೆ ಎಂದಿರುವ ಶ್ರೀರಾಮುಲು ಆದರೆ ಆ ರೀತಿಯ ರಾಜಕಾರಣವನ್ನು ಮುಂದುವರೆಸುವುದು ಬೇಡ ಎಂದು ರಾಮುಲು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಮುಖಂಡರೊಬ್ಬರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ಒಂದು ಹರಿದಾಡುತ್ತಿತ್ತು, ಇದಕ್ಕೆ ಶ್ರೀರಾಮುಲು ಆಕ್ರೋಶಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ, ಅವರ ಜೊತೆ ಕೆಲವು ಶಾಸಕರಿದ್ದಾರೆ, ಅವರೊಂದಿಗೆ ಬಿಜೆಪಿ ನಿಕಟ ಸಂಪರ್ಕದಲ್ಲಿದೆ, ಅವರನ್ನು ಪಕ್ಷಕ್ಕೆ ಕರೆತರುವ ಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.