"ಆ ಒಂದು ವಿಚಾರಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ರಕ್ತಪಾತ ಆಗುತ್ತದೆ''
ಚಿತ್ರದುರ್ಗ, ಫೆಬ್ರವರಿ 10: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ರಕ್ತಪಾತವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಅವರ ಹಗಲು ಕನಸು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ಯಾ? ಕಾಂಗ್ರೆಸ್ ಶಾಸಕರು ಹೇಳಿದಾರಾ?, ಡಿಕೆ ಶಿವಕುಮಾರ್ ಹೇಳಿದಾರಾ? ಡಿಕೆಶಿ ಬಾಯಲ್ಲಿ ಹೇಳಿಸಲಿ, ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟ್ ಬೀಸಿದ ಬಿಜೆಪಿ ರಾಜ್ಯಾಧ್ಯಕ್ಷ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ರಾಜಕೀಯ ಪಕ್ಷಕ್ಕೆ ಒಂದು ವ್ಯವಸ್ಥೆ ಬೇಕು. ಜನ ಆಯ್ಕೆ ಮಾಡಬೇಕು, ನಂತರ ಶಾಸಕರು ಆಯ್ಕೆ ಮಾಡಬೇಕು. ಕೇಂದ್ರದ ನಾಯಕರು ಯಾರು ಮುಖ್ಯಮಂತ್ರಿ ಅಂತ ಆಯ್ಕೆ ಮಾಡಬೇಕು.
ನನ್ನ ಜೇಬಿನಲ್ಲಿ ಮುಖ್ಯಮಂತ್ರಿ ಸ್ಥಾನ ಇದೆ ಅಂತ ನಾನೇ ಮುಂದಿನ ಮುಖ್ಯಮಂತ್ರಿ ಅಂತ ಹೇಳಿದರೆ ಇದಕ್ಕಿಂತ ಸರ್ವಾಧಿಕಾರಿ ಧೋರಣೆ ಇದೆಯಾ? ಇದನ್ನು ಜನ ಮೆಚ್ಚುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿಕಾರಿದರು.
ಸಿದ್ದರಾಮಯ್ಯ ಮತ್ತೆ ಅಹಿಂದ ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಹಿಂದ ಹೋರಾಟ ಮಾಡಿದರೆ ತುಂಬಾ ಸಂತೋಷ. ನಾನು ಬೇಡ ಅನ್ನಲ್ಲ. ಅಲ್ಪಸಂಖ್ಯಾತ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರ ಬಿಟ್ಟು ಹಿಂದ ಅಂತ ಪದ ಶುರುಮಾಡಿದ್ದಾರೆ. ಸಾಬ್ರೂ ಕಟ್ಕೊಂಡು ಉದ್ಧಾರವಾಗಲ್ಲ ಎಂದು ಗೊತ್ತಾಗಿದೆ. ಅದಕ್ಕೋಸ್ಕರ ಹಿಂದ ಅಂತ ಶುರುಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಈಗಾಲಾದರು ಹಿಂದುಳಿದ ಬಗ್ಗೆ, ದಲಿತರ ಬಗ್ಗೆ, ಕಾಂಗ್ರೆಸ್ ನೆಲಕಚ್ಚಿದ ಬಗ್ಗೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಇಡೀ ಕುರುಬ ಸಮಾಜ ಜಾಗೃತಿ ಆದನಂತರ ಹಿಂದುಳಿದ, ದಲಿತರ ಬಗ್ಗೆ ಹಿಂದ ಅನ್ನೋ ಪದ ಅವರ ಬಾಯಲ್ಲಿ ಬಂತಲ್ಲ ಅದನ್ನು ಮುಂದುವರಿಸಿ ಎಂದು ಹೇಳಲು ಇಷ್ಟಪಡ್ತಿನಿ ಎಂದರು.
ಕಾಂಗ್ರೆಸ್ ಪಕ್ಷ, ಜೆಡಿಎಸ್ ಪಕ್ಷ, ಬಿಜೆಪಿಗೊ ಅಲ್ಲ, ಯಾರು ಅಭಿವೃದ್ಧಿ ಮಾಡ್ತಾರೋ ಅವರ ಜೊತೆಗೆ ಜನ ಇರ್ತಾರೆ. 17 ಜನರಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಿದೆ. ಅದನ್ನು ನಾವು ಹಿಂದುಳಿದವರಿಗೆ, ದಲಿತರಿಗೆ ಇನ್ನು ಹೆಚ್ಚಿನ ಕೆಲಸ ಮಾಡುತ್ತೇವೆ. ಇದನ್ನು ಸಿದ್ದರಾಮಯ್ಯನವರು ಅರ್ಥಮಾಡಿಕೊಳ್ಳಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.