ಸಚಿವ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ: ಕಾಂಗ್ರೆಸ್ ಒತ್ತಾಯ
ಚಿತ್ರದುರ್ಗ, ಜೂನ್ 2: ರಾಜ್ಯದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ನಡುವೆ ಆರೋಗ್ಯ ಸಚಿವ ಶ್ರೀರಾಮುಲು ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡುವಂತೆ ಚಿತ್ರದುರ್ಗ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ. ಶಿವು ಯಾದವ್ ಒತ್ತಾಯಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮಲು ಅವರು ತಮ್ಮ ಜವಾಬ್ದಾರಿ ಮರೆತು ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಮರೆತು ಸಾವಿರಾರು ಜನರೊಂದಿಗೆ ಬಹಿರಂಗ ಸಭೆ ಮಾಡಿದ್ದು ದುರದೃಷ್ಟಕರ ಎಂದು ಶಿವು ಯಾದವ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವರಿಗೆ ಚಿತ್ರದುರ್ಗದಲ್ಲಿ ಅದ್ದೂರಿ ಸ್ವಾಗತ!
ಶ್ರೀರಾಮಲುರವರು ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ಆರೋಗ್ಯ ಮಾರ್ಗಸೂಚಿಗಳನ್ನು ಮುರಿದಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಸಚಿವರಿಗೆ ಹಾರ ತುರಾಯಿ ಮೆರವಣಿಗೆ ಅವಶ್ಯಕತೆ ಇತ್ತೇ? ಸಾವಿರಾರು ಜನ ಸೇರಿ ಸಭೆ ನಡೆಸಲು ಅನುಮತಿ ಪಡೆಯಲಾಗಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಾವಿರಾರು ಜನ ಸೇರಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಆಡಳಿತ ಅವರ ಮೇಲೆ ಏಕೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಜಿಲ್ಲಾಡಳಿತಕ್ಕೂ ಪ್ರಶ್ನಿಸಿದ್ದಾರೆ. ಜೆಸಿಬಿಯಲ್ಲಿ ಹೂವಿನ ಹಾರ ಹಾಕಬೇಕಾದರೆ ಅಷ್ಟು ದೊಡ್ಡ ಹಾರ ತಯಾರಿಸುವಾಗ ಅದನ್ನು ಹೊರಗೆ ತರುವಾಗ, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವೇ? ಎಂದು ಕೇಳಿದರು.
ಚಿತ್ರದುರ್ಗದಲ್ಲೂ ಕಂಡುಬಂದ ಮಿಡತೆಗಳು; ರೈತರಲ್ಲಿ ಆತಂಕ
ಸುಮಾರು ಗಾಡಿಗಲ್ಲಿ ಅರ್ಧ ಕಿಲೋಮೀಟರ್ ಮೆರವಣಿಗೆಯಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಲಿಲ್ಲವೇ ಎಂದಿದ್ದಾರೆ. ಇಷ್ಟಕ್ಕೂ ಯಾವ ಪುರುಷಾರ್ಥಕ್ಕೆ ಆ ಬಾಗಿನ ಕಾರ್ಯಕ್ರಮ, ಆ ಭಾಗದ ಸ್ಥಳೀಯ ಶಾಸಕರಾದ ರಘುಮೂರ್ತಿಯವರ ಗಮನಕ್ಕೆ ತರದೆ ಸರ್ಕಾರಿ ಸಭೆ ನಡೆಸಿದ್ದು, ಶಿಷ್ಟಾಚಾರ ಉಲ್ಲಂಘನೆ ಅಲ್ಲವೇ ಎಂದಿದ್ದಾರೆ.
ಶ್ರೀರಾಮುಲುರವರು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಅವರು ನೈತಿಕ ಹೊಣೆಯನ್ನು ಹೊತ್ತು ಸಚಿವ ಸ್ಥಾನವಕ್ಕೆ ರಾಜೀನಾಮೆ ನೀಡಬೇಕು ಇಲ್ಲವೆ ಸಿಎಂ ಯಡಿಯೂರಪ್ಪನವರೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.