ಚಳ್ಳಕೆರೆಯಲ್ಲಿ ಮಕ್ಕಳ ಬಿಸಿಯೂಟದೊಂದಿಗೆ ಚೆಲ್ಲಾಟ; ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?
ಚಿತ್ರದುರ್ಗ, ನವೆಂಬರ್ 6: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಬಸವ ಹಟ್ಟಿ ಸರ್ಕಾರಿ ಶಾಲೆ ನಿನ್ನೆ ಸುದ್ದಿಯಾಗಿದ್ದು "ಬಿಸಿಯೂಟ"ದ ಕಾರಣವಾಗಿ. ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಏಕಾಏಕಿ ಅಸ್ವಸ್ಥರಾಗಿದ್ದರು. ಸುಮಾರು 70 ವಿದ್ಯಾರ್ಥಿಗಳು ಅಸ್ವಸ್ಥರಾಗಿ, ಅವರನ್ನು ಕಂಡು ಕೂಡಲೇ ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ಸ್ಥಳೀಯ ನಾಯಕನಹಟ್ಟಿ ಆಸ್ಪತ್ರೆಗೆ ಆ ಮಕ್ಕಳನ್ನು ದಾಖಲಿಸಿದ್ದರು. ನಂತರ ಸುಮಾರು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಶಾಲೆಯಲ್ಲಿ ಇಂಥ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜುಲೈನಲ್ಲೂ ಇದೇ ರೀತಿ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿತ್ತು. ಘಟನೆ ಮತ್ತೆ ಮರುಕಳಿಸಿರುವುದು ಬಿಸಿಯೂಟದ ಬಗ್ಗೆಯೇ ಭಯ ಹುಟ್ಟಿಸುವಂತೆ ಮಾಡಿದೆ. ಈ ಪುಟ್ಟ ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೂ ಮೇಲ್ನೋಟಕ್ಕೇ ಕಂಡುಬರುತ್ತಿದೆ.
ಚಳ್ಳಕೆರೆಯಲ್ಲಿ ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚಿತ್ರದುರ್ಗ ಜಿಲ್ಲಾ ಡಿಡಿಪಿಐ ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆರೋಗ್ಯಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟಕ್ಕೂ ಈ ಘಟನೆಗೆ ಕಾರಣವೇನು? ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ...
ಊಟದಲ್ಲಿ ಬಿದ್ದಿದ್ದ ಹಲ್ಲಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಚನ್ನಬಸವ ಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ನಿನ್ನೆ 12.45ರ ಸುಮಾರಿಗೆ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುವಾಗ ಓರ್ವ ವಿದ್ಯಾರ್ಥಿ ತಟ್ಟೆಯಲ್ಲಿ ಹಲ್ಲಿ ಸತ್ತು ಬಿದ್ದಿದ್ದನ್ನು ನೋಡಿ ಶಿಕ್ಷಕರಿಗೆ ತೋರಿಸಿದ್ದಾನೆ. ತಕ್ಷಣ ಶಿಕ್ಷಕರು ಊಟ ಮಾಡುವುದನ್ನು ನಿಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ಸಂಕಟ, ಎದೆಯುರಿ ಶುರುವಾಗಿದೆ. ತಕ್ಷಣ ವಿದ್ಯಾರ್ಥಿಗಳನ್ನು ನಾಯಕನಹಟ್ಟಿ ಆಸ್ಪತ್ರೆಗೆ ಸೇರಿಸಲಾಗಿದೆ. ತದನಂತರ 11 ಮಕ್ಕಳನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿತ್ತು. ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಸಿರಾಟ ತೊಂದರೆ ಇದ್ದುದರಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ವಿದ್ಯಾರ್ಥಿಗಳು ಸದ್ಯ ಆರೋಗ್ಯವಾಗಿದ್ದರೆಂದು ತಿಳಿದುಬಂದಿದೆ.
ಶಾಲೆಯಲ್ಲಿ ಇಂಥ ಘಟನೆ ಇದೇ ಮೊದಲಲ್ಲ
ಆದರೆ ಈ ಶಾಲೆಯಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜುಲೈ 17ರಂದು ಇದೇ ತರಹದ ಘಟನೆ ನಡೆದಿತ್ತು. ಆಗಲೂ ಬಿಸಿಯೂಟಕ್ಕೆ ಹಲ್ಲಿ ಬಿದ್ದು ಕೆಲ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಅಷ್ಟೇ ಅಲ್ಲ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹನುಮಂತದೇವರ ಕಣಿವೆಯಲ್ಲಿರುವ ಮೊರಾರ್ಜಿ ಅಲೆಮಾರಿ ವಸತಿ ಶಾಲೆಯಲ್ಲಿ ಸೆಪ್ಟೆಂಬರ್ 30ರಂದು ಬೆಳಿಗ್ಗೆ ಚಿತ್ರಾನ್ನ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಘಟನೆ ಕೂಡ ನಡೆದಿತ್ತು.
ಬೆಳಗಾವಿ: ಬಿಸಿಯೂಟದಲ್ಲಿ ಹಲ್ಲಿ, ಮಕ್ಕಳು ಆಸ್ಪತ್ರೆಗೆ ದಾಖಲು
ಆಡಳಿತ ಮಂಡಳಿ, ಶಾಲಾ ಅಭಿವೃದ್ಧಿ ಸಮಿತಿಯ ತಿಕ್ಕಾಟ
ಶಾಲೆಯಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿರುವುದಕ್ಕೆ ಶಾಲಾ ಆಡಳಿತ ಮಂಡಳಿ, ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಹಾಗೂ ಅಡುಗೆ ಸಹಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಕಾರಣ ಎಂಬುದು ಸಾರ್ವಜನಿಕರ ಅಭಿಪ್ರಾಯ. ಇವರ ನಡುವೆ ಹೊಂದಾಣಿಕೆ ಇಲ್ಲದಿರುವುದಕ್ಕೆ ಅಮಾಯಕ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ ಎನ್ನುವ ಆರೋಪಗಳೂ ಕೇಳಿಬಂದಿವೆ. ಇವರ ನಡುವಿನ ತಿಕ್ಕಾಟದಿಂದ ವಿದ್ಯಾರ್ಥಿಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ.
ಸೂಕ್ತ ಕ್ರಮಕ್ಕೆ ಶ್ರೀರಾಮುಲು ಆಗ್ರಹ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಜೊತೆಗೆ ಬಿಸಿಯೂಟಕ್ಕೆ ಪೂರೈಸಲಾಗುವ ಪರಿಕರಗಳ ಪರೀಕ್ಷೆಗೂ ಸೂಚಿಸಲಾಗಿದೆ. ಈ ಘಟನೆ ಹಿಂದಿನ ನಿಖರ ಕಾರಣ ಹಾಗೂ ನಿರ್ಲಕ್ಷ್ಯದ ಕುರಿತೂ ತನಿಖೆಯಿಂದ ತಿಳಿಯಬೇಕಿದೆ.
ಅಡುಗೆ ಸಹಾಯಕರ ನಿರ್ಲಕ್ಷ್ಯ ಎಂದ ಅಧಿಕಾರಿಗಳು
ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ ವಿದ್ಯಾರ್ಥಿಗಳು ಶಾಲೆಗೆ ಇಂದು ಚಿತ್ರದುರ್ಗ ಜಿಲ್ಲಾ ಡಿಡಿಪಿಐ ಹಾಗೂ ಡಿಎಚ್ಒ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಡಿಡಿಪಿಐ ರವಿಶಂಕರ್ ರೆಡ್ಡಿ, "ಬಿಸಿಯೂಟದ ಅಡುಗೆ ಸಹಾಯಕರ ನಿರ್ಲಕ್ಷದಿಂದ ಈ ಘಟನೆ ನಡೆದಿದೆ. ಅವರನ್ನು ತೆಗೆದುಹಾಕಲು ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಸತ್ಯಭಾಮ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಡಿಎಚ್ಒ ಡಾ.ಪಾಲಾಕ್ಷ ಮಾತನಾಡಿ, "ಶಿಕ್ಷಕರು ಮತ್ತು ಅಡುಗೆ ಸಹಾಯಕರ ಹೇಳಿಕೆ ಪಡೆದಿದ್ದು, ಅಕ್ಕಿ, ಬೇಳೆ, ಸಾಂಬಾರ್ ಪುಡಿ ಇವುಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.