2ಎ ಮೀಸಲಾತಿ ಹೋರಾಟ; ಪಾದಯಾತ್ರೆ ಅಂತ್ಯವಾಗಲಿದೆಯೇ?
ಚಿತ್ರದುರ್ಗ, ಫೆಬ್ರವರಿ 5; ಪಂಚಮಸಾಲಿ ಸಮುದಾಯಕ್ಕೆ 2ಎ ಪ್ರವರ್ಗ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.
ಬೆಂಗಳೂರು ನಗರಕ್ಕೆ ಹೊರಟಿರುವ ಪಾದಯಾತ್ರೆ ಚಿತ್ರದುರ್ಗದ ಹಿರಿಯೂರು ತಾಲೂಕಿನಲ್ಲಿದೆ. ಮುರುಗೇಶ್ ನಿರಾಣಿ ನೇತೃತ್ವದ ಸಚಿವರ ನಿಯೋಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ, ಪಾದಯಾತ್ರೆ ನಿಲ್ಲಿಸುವಂತೆ ಮನವೊಲಿಸಿದೆ.
ಫೆ.7ರಂದು ಬೆಂಗಳೂರು ತಲುಪಲಿದೆ ಕುರುಬರ ಬೃಹತ್ ಪಾದಯಾತ್ರೆ
ಈ ಕುರಿತು ಹಿರಿಯೂರಿನಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. "ಮುಖ್ಯಮಂತ್ರಿಗಳೇ ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಹಿಂದುಳಿದ ವರ್ಗಕ್ಕೆ ಮನವಿ ಮಾಡಿ, ಆದಷ್ಟು ವರದಿ ತರಿಸುವ ಪ್ರಯತ್ನ ಮಾಡಿ. ನಾವು ಗಟ್ಟಿ ತೀರ್ಮಾನ ಮಾಡಿದ್ದೇವೆ" ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹ
"2ಎ ಮೀಸಲಾತಿ ಆದೇಶ ಪತ್ರ ಬಂದ ನಂತರ ಪೀಠಕ್ಕೆ ವಾಪಸ್ ಹೋಗುತ್ತೇವೆ. ಮುಖ್ಯಮಂತ್ರಿಗಳೇ ನೀವು ಬನ್ನಿ, ನಿಮ್ಮ ಜೊತೆ ಮಾತುಕತೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಿ, ಗೆಜೆಟ್ ಮಾಡಿ ರಾಜ್ಯದ ಡಿಸಿ ಕಚೇರಿಯಲ್ಲಿ 2ಎ ಮೀಸಲಾತಿ ಪ್ರಮಾಣ ಪತ್ರ ಕೊಡಲು ಆದೇಶ ಮಾಡಬೇಕು" ಎಂದರು.
ಯಡಿಯೂರಪ್ಪ ಅವರಿಗೆ ಬೂಮ್ರಾಂಗ್ ಆಯ್ತಾ ಲಿಂಗಾಯತ ಮೀಸಲಾತಿ?
"ಮೀಸಲಾತಿ ಪತ್ರ ಕೊಡುವವರೆಗೂ ಕೂಡಲ ಸಂಗಮ ಪಂಚಮಸಾಲಿ ಪೀಠಕ್ಕೆ ನಾನು ಹೋಗಲ್ಲ. ಬೇಗ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಲಿ" ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಇಂದು ಸಂಜೆ ಸಭೆ; "ಇಂದು ಸಂಜೆ 6 ಗಂಟೆಗೆ ನಮ್ಮ ಹಾಲಿ ಸಚಿವರು, ಶಾಸಕರು, ಮಾಜಿ ಶಾಸಕರ ಸಭೆ ಕರೆದಿದ್ದೇವೆ. ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಸಭೆ ನಡೆಯಲಿದೆ. ನಿಯೋಗ ಬಂದು ಮಾತುಕತೆ ಮಾಡಿದ್ದರ ಕುರಿತು ಚರ್ಚೆ ಮಾಡುತ್ತೇವೆ" ಎಂದರು.
"ಫೆಬ್ರವರಿ 15ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತೀರ್ಮಾನ ಮಾಡಿದ್ದೇವೆ. ಜನಕ್ಕೆ ನಾನು ಮಾತು ಕೊಟ್ಟು ಬಂದಿದ್ದೇನೆ. 2ಎ ಮೀಸಲಾತಿ ತಂದೆ ತರುತ್ತೇನೆ ಎಂದು ಭರವಸೆ ನೀಡಿದ್ದೇನೆ" ಎಂದು ಹೇಳಿದರು.
Recommended Video
"ವರದಿ ಬಂದ ಬಳಿಕ ವಿಳಂಬವಾದರೆ ಯಾವ ರೀತಿಯ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಸಚಿವರಾದ ಮುರುಗೇಶ್ ನಿರಾಣಿ, ಸಿ. ಸಿ. ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವರು ಆಗಮಿಸುತ್ತಾರೆ. ಸರ್ಕಾರದಿಂದ ಮತ್ತೊಂದು ಸಂದೇಶ ತರುವ ನಿರೀಕ್ಷೆಯಲ್ಲಿ ನಾವಿದ್ದೇವೆ" ಎಂದು ತಿಳಿಸಿದರು.