ಹೊಸ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಎಲ್ಲೆಡೆಯಿಂದಲೂ ಒತ್ತಾಯ
ಜುಲೈ 27: ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸರ್ಕಾರ ರಚನೆಗೆ ಸನ್ನದ್ಧವಾಗುತ್ತಿದ್ದಾರೆ. ಆದರೆ ಈ ನಡುವೆಯೇ ರಾಜ್ಯದ ವಿವಿಧೆಡೆಯಿಂದ, ವಿವಿಧ ಸಮಾಜ ಸಮುದಾಯಗಳಿಂದ ಸಚಿವ ಸ್ಥಾನಕ್ಕಾಗಿ ಒತ್ತಾಯವೂ ಕೇಳಿಬರಲು ಆರಂಭಿಸಿದೆ.
ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಕಡೆಯಿಂದ ಸಚಿವ ಸ್ಥಾನಕ್ಕೆ ಭಾರೀ ಒತ್ತಾಯ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲಿ, ಯಾದವ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಮೂಲಕ ಬಿಎಸ್ ವೈ ನುಡಿದಂತೆ ನಡೆಯಬೇಕು ಎಂದು ಚಿತ್ರದುರ್ಗದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಅಧಿಕಾರಕ್ಕೆ ಬರುತ್ತಿದ್ದಂತೆ ಬಿಎಸ್ವೈಗೆ ಸಂಕಷ್ಟ: ಹಳೆ ಕೇಸ್ ರೀಓಪನ್
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಯಾದವ ಗುರುಪೀಠದ ಭಕ್ತರು ಹಾಗು ವಿವಿಧ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಲೋಕಸಭಾ ಚುನಾವಣೆ ವೇಳೆ ಬಿಎಸ್ ವೈ ಶ್ರೀಮಠಕ್ಕೆ ಆಗಮಿಸಿದ್ದರು. ಆಗ ಮುಂಬರುವ ದಿನಗಳಲ್ಲಿ ನಾನು ಸಿಎಂ ಆಗಲಿದ್ದು, ಯಾದವ ಸಮುದಾಯಕ್ಕೆ ಸಚಿವ ಸ್ಥಾನ ನೀಡಿ, ಗೊಲ್ಲರ ಅಭಿವೃದ್ಧಿ ನಿಗಮ ಮಾಡುತ್ತೇವೆಂದು ಭರವಸೆ ನೀಡಿದ್ದರು. ಕಳೆದ 15 ವರ್ಷಗಳಿಂದ ವಿಧಾನಸೌಧದಲ್ಲಿ ನಮ್ಮ ಪ್ರತಿನಿಧಿ ಇಲ್ಲದೇ ಸಮುದಾಯದ ಸೊರಗಿದೆ. ಆದ್ದರಿಂದ ಈ ಬಾರಿ ಯಾದವ ಸಮುದಾಯದ ಮಹಿಳೆ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು" ಎಂದು ಆಗ್ರಹಿಸಿದರು.
ಬಳ್ಳಾರಿಯಲ್ಲೂ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಜಿಲ್ಲಾ ಯಾದವ ಸಮುದಾಯದ ಮುಖಂಡರು ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. "ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಯಾದವ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವ ಅರ್ಹತೆ ಅವರಿಗಿದೆ" ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ: ಪ್ರಧಾನಿ ಮೋದಿ ಮೌನ!
ಇದೇ ಸಂದರ್ಭ, ದಾವಣಗೆರೆಯಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಚಾ ಓಲೆಕರ್ ರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಛಲವಾದಿ ಸಮಾಜ ಒತ್ತಾಯಿಸಿದೆ. "ಚುನಾವಣೆ ಪೂರ್ವದಲ್ಲಿ ಬಿ ಎಸ್ ಯಡಿಯೂರಪ್ಪರವರು ಶಿವಮೊಗ್ಗದಲ್ಲಿ ಛಲವಾಧಿ ಸಮಾಜಕ್ಕೆ ಸಚಿವ ಸ್ಥಾನ ನೀಡುತ್ತೇವೆ ಎಂದಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಬಾರಿ ಓಲೆಕರ್ ರವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.