ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಬಿರುಸಿನ ಪ್ರಚಾರ
ಚಿತ್ರದುರ್ಗ, ಜೂನ್ 16: ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕುರಿತಂತೆ ಪಕ್ಷೇತರ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
Recommended Video
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಶ್ರೀನಿವಾಸ್ ಟಿಕೆಟ್ ಬಯಸಿದ್ದರು. ಆದರೆ ವರಿಷ್ಠರು ಅವರ ಪತ್ನಿ ಕೆ. ಪೂರ್ಣಿಮಾಗೆ ಟಿಕೆಟ್ ನೀಡಿದರು. ಪೂರ್ಣಿಮಾ ಅವರು ಹಿರಿಯೂರಿನಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಕ್ಷೇತ್ರದಲ್ಲಿ ಪತ್ನಿಯ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿರುವ ಡಿ.ಟಿ.ಎಸ್. ವಿಧಾನ ಸಭೆಯ ಟಿಕೆಟ್ ಕೈತಪ್ಪಿದ್ದರಿಂದ ಆಗ್ನೇಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಲು ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗುವ ಕನಸು ಕಂಡಿದ್ದರು. ಆದರೆ ಇಲ್ಲಿಯೂ ವರಿಷ್ಠರು ಡಿ.ಟಿ.ಶ್ರೀನಿವಾಸ್ ಗೆ ಮಣೆ ಹಾಕದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ವಿಧಾನ ಪರಿಷತ್: ಒಂದು ಸ್ಥಾನ, ಇಪ್ಪತ್ತೊಂಭತ್ತು ಆಕಾಂಕ್ಷಿಗಳು
ಈಗಾಗಲೇ ಚಿತ್ರದುರ್ಗ ಜಿಲ್ಲೆ, ಚಿಕ್ಕಬಳ್ಳಾಪುರ, ಕೊಲಾರ, ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಒಂದು ಸುತ್ತಿನ ಪ್ರಚಾರ ಕೈಗೊಂಡಿದ್ದಾರೆ. ಆಗ್ನೇಯ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಶ್ರಮ ವಹಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಾಕಷ್ಟು ಶ್ರಮಿಸಿ ಮತದಾರರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮತಗಳು ಇದ್ದು, ಈಗ 1 ಲಕ್ಷಕ್ಕೂ ಹೆಚ್ಚು ಮತಗಳಾಗಿವೆ. ಹಿರಿಯೂರಿನಲ್ಲಿ 1688 ಮತಗಳಿದ್ದು, ಈಗ 5000 ಮತಗಳು ಆಗಿವೆ. ಅದೇ ರೀತಿ ಚಳ್ಳಕೆರೆ, ಪಾವಗಡ, ಶಿರಾ, ಜಗಳೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಡಿಮೆ ಇದ್ದ ಮತಗಳು ಹೆಚ್ಚಾಗಿದ್ದು, ನೋಂದಣಿ ಮಾಡಿಸಲಾಗಿದೆ.
ವಿಧಾನಸಭಾ ಚುನಾವಣೆ ಮುನ್ನ, ಕೆ.ಪೂರ್ಣಿಮಾ ಅವರನ್ನು ಗೆಲ್ಲಿಸಿ ಬನ್ನಿ ನಂತರ ನಿಮಗೆ ಒಳ್ಳೆಯ ಸ್ಥಾನ ಮಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರು. ಈಗ ನುಡಿದಂತೆ ನಡೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎನ್ನುತ್ತಾರೆ ಡಿ.ಟಿ. ಶ್ರೀನಿವಾಸ್. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಿಲ್ಲ. ಪಕ್ಷದಲ್ಲಿ ಸಾಮಾಜಿಕ ನ್ಯಾಯವಿಲ್ಲ ಹಾಗೂ ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.