'ಬಿಜೆಪಿ ಸರಕಾರದಲ್ಲಿ ಗೋಡೆ ತಟ್ಟಿದರೂ ಕಾಸು..ಕಾಸು..ಅಂತೆ ಕೇಳುತ್ತೆ'
ಚಿತ್ರದುರ್ಗ, ಏಪ್ರಿಲ್ 5: ''ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಲಂಚ ತಾಂಡವಾಡುತ್ತಿದೆ,'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. 'ಈ ದೇಶಕ್ಕೆ ರೈತ, ಈ ದೇಶಕ್ಕೆ ಕಾರ್ಮಿಕ, ಸೈನಿಕ ಮತ್ತು ಶಿಕ್ಷಕ ಈ ನಾಲ್ಕು ಆಧಾರ ಸ್ತಂಭಗಳು. ದೇಶದ ಇತಿಹಾಸದಲ್ಲಿ ಈ ನಾಲ್ಕು ವರ್ಗಗಳ ಪರವಾಗಿ ಅತಿಹೆಚ್ಚು ಕೆಲಸ ಮಾಡಿದವರು ಎಂದರೆ ಅದು ಬಾಬೂ ಜಗಜೀವನರಾಮ್"ಎಂದು ಡಿಕೆಶಿ ಅಭಿಪ್ರಾಯಪಟ್ಟರು.
"ಈ ದೇಶದ ಇತಿಹಾಸವೆಂದರೆ, ಅದು ಕಾಂಗ್ರೆಸ್ ಇತಿಹಾಸ. ಸಿದ್ದರಾಮಯ್ಯನವರ ಸರಕಾರ ಕೊಟ್ಟ ಭರವಸೆಯನ್ನೆಲ್ಲಾ ಈಡೇರಿಸಿತ್ತು. ನಾನು ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ, ವಿಶ್ವದಲ್ಲೇ ಅತಿದೊಡ್ಡದಾದ ಸೋಲಾರ್ ಪಾರ್ಕ್ ಪಾವಗಡದಲ್ಲಿ ನಿರ್ಮಿಸಿದೆ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ'
"ಗೋವಿಂದಪ್ಪನವರ ಕ್ಷೇತ್ರದಲ್ಲಿ ಹದಿನೈದು ಸಾವಿರ ಪಂಪ್ ಸೆಟ್ ಅನ್ನು ಕೊಟ್ಟ ಕೀರ್ತಿ ಸಿದ್ದರಾಮಯ್ಯನವರ ಸರಕಾರದ್ದು. ದಾಳಿಂಬೆ ರೈತರಿಗೆ ಅನುಕೂಲ ಮಾಡಿಕೊಟ್ಟೆವು. ಏಳು ಗಂಟೆಯ ಕಾಲ ಫುಲ್ ಫೇಸ್ ವಿದ್ಯುತ್ ಅನ್ನು ಕೊಟ್ಟ ಶ್ರೇಯಸ್ಸು ನಮ್ಮ ಸರಕಾರದ್ದು"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಇವತ್ತು ವಿದ್ಯುತ್ ಬೆಲೆ ಗಗನಕ್ಕೇರುತ್ತಿದೆ, ರೈತರ ಆದಾಯ ಭೂಮಿಗೆ ಹೋಗುತ್ತಿದೆ. ಎಲ್ಲಾ ಬೆಲೆಗಳು ಗಗನಕ್ಕೇರುತ್ತಿದೆ, ಬಿಜೆಪಿ ಸರಕಾರ ಒಂದು ವರ್ಗದ ಬಗ್ಗೆಯೂ ಯೋಚನೆ ಮಾಡುತ್ತಿದೆಯಾ? ಲಂಚ ಅನ್ನುವುದು ಬೊಮ್ಮಾಯಿ ಸರಕಾರದಲ್ಲಿ ತಾಂಡವಾಡುತ್ತಿದೆ"ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.
"ತಾಲೂಕು ಆಫೀಸ್, ಬಿಡಿಎ ಕಚೇರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಯಾವುದೇ ಸರಕಾರೀ ಇಲಾಖೆಗೆ ಹೋಗಿ, ಗೋಡೆ ತಟ್ಟಿದರೆ ಸಾಕು ಕಾಸು..ಕಾಸು..ಕಾಸು ಅಂತ ಕೇಳುತ್ತೆ. ಎಲ್ಲಾ ಗುತ್ತಿಗೆದಾರರ ನಲವತ್ತು ಪರ್ಸೆಂಟ್ ಎಂದು ಈಗಾಗಲೇ ಆರೋಪಿಸಿದ್ದಾರೆ. ಇದು ಇಂದಿನ ಸರಕಾರ"ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
"ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬೂ ಜಗಜೀವನರಾಮ್ ಇಬ್ಬರೂ, ಈ ದೇಶದ ಬಹುದೊಡ್ಡ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದ ಹಾಗೆ. ಕೋಮು ಭಾವನೆಯಿಂದ ಈ ರಾಜ್ಯ ಮತ್ತು ದೇಶವನ್ನು ಬಿಜೆಪಿಯವರು ಒಡೆಯುತ್ತಿದ್ದಾರೆ. ಈ ದೇಶದ ಪ್ರಧಾನಿಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದರು. ಅದು ಬಾಯಿ ಮಾತಲ್ಲೇ ಉಳಿದು ಹೋಯಿತು"ಎಂದು ಡಿ.ಕೆ.ಶಿವಕುಮಾರ್ ಬಿಜೆಪಿ ಸರಕಾರದ ಆಕ್ರೋಶ ಹೊರಹಾಕಿದರು.
Recommended Video