ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಕೋಟೆನಾಡು ರೈತರ ಸಂಕಷ್ಟ
ಚಿತ್ರದುರ್ಗ, ಮಾರ್ಚ್ 30: ಈಗ ಎಲ್ಲೆಲ್ಲೂ ಕೊರೊನಾದ್ದೇ ಸುದ್ದಿ. ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಜನರು ಆತಂಕದಲ್ಲಿದ್ದಾರೆ. ರೈತರ ಸ್ಥಿತಿಯಂತೂ ಕೇಳುವವರೇ ಇಲ್ಲ.
ಕೊರೊನಾ ಲಾಕ್ ಡೌನ್ ನಿಂದಾಗಿ ಬೆಳೆದಿದ್ದ ಬೆಳೆಯಿಂದ ಲಾಭ ಮಾಡಿಕೊಳ್ಳಲಾಗದೇ ರೈತರು ಕಂಗಾಲಾಗಿದ್ದು, ತಾವು ಬೆಳೆದ ಬೆಳೆಯನ್ನೇ ಎಸೆಯುತ್ತಿದ್ದಾರೆ. ಮೈಸೂರಿನಲ್ಲೂ ನಿನ್ನೆಯಷ್ಟೇ ಲೋಡ್ ಗಟ್ಟಲೆ ಟೊಮೆಟೊವನ್ನು ನೀರಿಗೆ ಎಸೆದ ಸಂಗತಿ ನಡೆದಿತ್ತು. ಕೋಟೆ ನಾಡು ಚಿತ್ರದುರ್ಗದಲ್ಲೂ ರೈತರೊಬ್ಬರು ಟೊಮೆಟೊ ಬೆಳೆದು ಈಗ ಕೈಸುಟ್ಟುಕೊಂಡಿದ್ದಾರೆ.
ಕುಸಿದ ಟೊಮ್ಯಾಟೊ ಬೆಲೆ: ಮೈಸೂರಿನಲ್ಲಿ ರೈತರು ಮಾಡಿದ್ದು ಹೀಗೆ
ಕೆ.ಜಿಗೆ ಒಂದು ರೂಪಾಯಿಗೆ ಕೇಳುತ್ತಿರುವ ಮಧ್ಯವರ್ತಿಗಳು
ಹಿರಿಯೂರು ತಾಲ್ಲೂಕಿನ ಮುಂಗಸವಳ್ಳಿ ಗ್ರಾಮದ ಬಂಗಾರಣ್ಣ ಎನ್ನುವ ರೈತ ಸುಮಾರು ಹತ್ತು ಎಕರೆಯಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆ ಕೊಂಡೊಯ್ಯಲು ಪೊಲೀಸರು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಒಂದು ಕೆಜಿಗೆ 20ರೂ ಸಿಕ್ಕರೂ ಹತ್ತು ಲಕ್ಷ ಹಣ ಸಿಗುತ್ತಿತ್ತು. ಇತ್ತ ಮಧ್ಯವರ್ತಿಗಳು ಕೇವಲ ಕೆಜಿಗೆ ಒಂದು ರೂಪಾಯಿಯಂತೆ ಕೇಳುತ್ತಾರೆ. ನಾವು ಹಾಕಿದ ಖರ್ಚು ಕೂಡ ಬರುವುದಿಲ್ಲ, ಸಿಟಿಯಲ್ಲಿ ಒಂದು ಕೆಜಿ ಟೊಮೆಟೊ 30ರಿಂದ 40 ರೂಗೆ ಮಾರುತ್ತಾರೆ ಎಂದು ಬಂಗಾರಣ್ಣ ಕಷ್ಟ ಹೇಳಿಕೊಂಡಿದ್ದಾರೆ.
ಮಾರುಕಟ್ಟೆಗೆ ಹೋಗಲು ರೈತನ ಮನವಿ
ಪೊಲೀಸರು ನಮಗೆ ಮಾರುಕಟ್ಟೆ ತೆಗೆದುಕೊಂಡು ಹೋಗಲು ಬಿಡಬೇಕು. ಆದರೆ ಅವರು ಬಿಡುತ್ತಿಲ್ಲ. ನಾವು ಟೊಮೆಟೊವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕನಿಷ್ಠ ಕೆ.ಜಿ.ಗೆ 15ರೂ ಆದರೂ ಸಿಗುತ್ತದೆ. ಇಲ್ಲದಿದ್ದರೆ ಬೆಳೆದಿರುವ ಸಂಪೂರ್ಣ ಬೆಳೆಯನ್ನು ರಸ್ತೆಗೆ ಸುರಿಯಬೇಕಾಗುತ್ತದೆ. ದಯವಿಟ್ಟು ನಮಗೆ ಮಾರುಕಟ್ಟೆಗೆ ಹೋಗಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೇರಳದಲ್ಲಿ ಕೊರೊನಾ ಅಟ್ಟಹಾಸ; ಇನ್ನೂ ಇಲ್ಲಿ ಗಡಿ ಬಂದ್ ಮಾಡಿಲ್ಲ ಯಾಕೆ?
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಕೊರೊನಾ ಹಿನ್ನೆಲೆಯಲ್ಲಿ ದೇವದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ಜನರು ಮನೆಯಿಂದ ಯಾರು ಹೊರ ಬರದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ಚಿತ್ರದುರ್ಗದ ರೈತರ ಪಾಡು ಹೇಳತೀರದಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವ ಸ್ಥಿತಿಯಲ್ಲಿ ರೈತರು ಇದ್ದಾರೆ. ಈಗಾಗಲೇ ಬರಗಾಲಕ್ಕೆ ತತ್ತರಿಸಿರುವ ಚಿತ್ರದುರ್ಗ ರೈತರು ಇರುವ ಅತ್ಯಲ್ಪ ನೀರಿನಲ್ಲಿ ಅಷ್ಟೋ ಇಷ್ಟೋ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದರು. ಈಗ ಅವರ ಪಾಡು ಏನಾಗುವುದೋ ಗೊತ್ತಿಲ್ಲ.
ಹೂಗಳನ್ನೂ ಗಿಡದಿಂದ ಕಿತ್ತಿಲ್ಲ
ಹಿರಿಯೂರು ತಾಲ್ಲೂಕಿನ ತವಂದಿ ಗ್ರಾಮದ ಯುವ ರೈತ ಟಿ.ಆರ್. ಪ್ರಶಾಂತ್ ಕನಕಾಂಬರ ಹೂವಿನ ಗಿಡ ಬೆಳೆದಿದ್ದು, ಹೂವನ್ನು ಕೇಳುವವರೇ ಇಲ್ಲದಂತಾಗಿದೆ. ಹೂಗಳು ಗಿಡದಲ್ಲಿ ಅರಳಿ ನಿಂತಿವೆ. ಗಿಡದಲ್ಲೇ ಹೂವನ್ನು ಹಾಗೆ ಬಿಡಲಾಗಿದೆ. ಪ್ರತಿ ನಿತ್ಯ ಹೂ 3 ರಿಂದ 4 ಕೆಜಿ ಹೂ ಬರುತಿತ್ತು, ಒಂದು ಕೆ.ಜಿಗೆ 20 ಮಾರು ಹೂ ಆಗುತ್ತದೆ. ಒಂದು ಮಾರಿಗೆ ಕನಿಷ್ಠ ಅಂದ್ರೂ 25-30 ರೂಂ ನಂತೆ ದಿನನಿತ್ಯ 1000 ಸಾವಿರ ಆದಾಯ ಬರುತ್ತಿತ್ತು. ಕೊರೊನಾದಿಂದ ನಮ್ಮ ಹೂವಿನ ವ್ಯಾಪಾರ ಸ್ಥಗಿತಗೊಂಡಿದೆ ಎಂದು ಪ್ರಶಾಂತ್ ಬೇಸರ ವ್ಯಕ್ತಪಡಿಸಿದರು.