ಬೀದಿಗೆ ಬಂದರೆ ನೀನು, ನಿನ್ನ ಜೊತೆಗೆ ಬರುವೆ ನಾನು: ಕೊರೊನಾ
ಚಿತ್ರದುರ್ಗ, ಎಪ್ರಿಲ್ 01: ಭಾರತ ಲಾಕ್ ಡೌನ್ ಆಗಿ ಇಂದಿಗೆ ಒಂದು ವಾರ ಕಳೆಯುತ್ತಾ ಬಂದರೂ ಜನರು ಮಾತ್ರ ಸರ್ಕಾರಗಳ ಆದೇಶವನ್ನು ಧಿಕ್ಕರಿಸಿ ಬೈಕ್, ಆಟೋ, ಕಾರುಗಳಲ್ಲಿ ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇರುವ ಹಿರಿಯೂರಿನ ಪೊಲೀಸರು ಇದೀಗ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇನ್ನು ಕೆಲವರು ಇತರೆ ನೆಪವೊಡ್ಡಿ ತಿರುಗಾಡುತ್ತಿದ್ದಾರೆ. ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಓಡಾಡುತ್ತಿರುವುದನ್ನು ನಿಲ್ಲಿಸುತ್ತಿಲ್ಲ. ಇದರಿಂದ ಬೇಸತ್ತ ಹಿರಿಯೂರಿನ ಪೋಲಿಸರು ಮತ್ತು ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಹಿರಿಯೂರು ನಗರದ ಗಾಂಧಿ ಸರ್ಕಲ್, ಸಾರ್ವಜನಿಕ ಆಸ್ಪತ್ರೆ ಮುಂಭಾಗ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಕೋವಿಡ್-19 ಬಗ್ಗೆ ಅರಿವು ಮಾಡಿಸುತ್ತಿದ್ದಾರೆ.
ರಸ್ತೆಗಳಲ್ಲಿ ಬರಹಗಳನ್ನು ಬರೆಸುವ ಮೂಲಕ ಜನರ ಗಮನ ಸೆಳೆಯುತಿದ್ದು, ಜೊತೆಗೆ ಅವರು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಹಗಲು, ಇರುಳು ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಹಿರಿಯೂರು ನಗರದ ಠಾಣೆ ಪಿಐಸ್ಐ ನಾಗರಾಜ್ ನೇತೃತ್ವದಲ್ಲಿ "ಬೀದಿಗೆ ಬಂದರೆ ನೀನು, ನಿನ್ನ ಜೊತೆಗೆ ಬರುವೆ ನಾನು'! ಎಂಬ ಎಚ್ಚರಿಕೆ ನೀಡುತ್ತಿದ್ದಾರೆ.
ದಯಮಾಡಿ ನೀವು ಯಾರು ಸಹ ರಸ್ತೆಗೆ ಬರಬೇಡಿ, ಒಂದು ವೇಳೆ ಬಂದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ, ಎನ್ನುವ ಸಂದೇಶದ ಮೂಲಕ ಹಿರಿಯೂರು ತಾಲೂಕಿನ ಜನತೆಗೆ ಪೊಲೀಸ್ ಹಾಗೂ ಅಧಿಕಾರಿಗಳು ಅರಿವು ಮೂಡಿಸುತಿದ್ದಾರೆ.
ನಿಮ್ಮ ಮನೆಯವರ ಸುರಕ್ಷತೆಗಾಗಿ ಮನೆಯಲ್ಲಿ ಇರಿ, ನಿಮ್ಮ ಕುಟುಂಬದವರ ರಕ್ಷಣೆಗೆ ಒತ್ತು ನೀಡಿ, ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ, ನಿಮ್ಮ ಮಕ್ಕಳ ಭವಿಷ್ಯದ ಕಡೆ ಯೋಚಿಸಿ ಎಂದು ತಿಳಿಹೇಳುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಗೆ ಅಧಿಕಾರಿಗಳು ನಿರಂತರವಾಗಿ ಕೊರೊನಾ ವೈರಸ್ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಜನರನ್ನು ರಕ್ಷಿಸುವ ಸಲುವಾಗಿ ಭಾರತವನ್ನು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜನರು ಇದಕ್ಕೆ ಸಹಕರಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡರು.
ಮಹಾಮಾರಿ ಕೊರೊನಾ ವೈರಸ್ ತೊಲಗಿಸಲು ವೈದ್ಯರು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಮಹಾಮಾರಿ ಕೊರೊನಾ ವೈರಸ್ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ. ಒಂದಿಷ್ಟು ದಿನಗಳ ಕಾಲ ಮನೆಯಲ್ಲಿ ಇರಿ, ಮಹಾಮಾರಿ ಕೊರೊನಾ ತೊಲಗಿಸಿ ನೆಮ್ಮದಿ ಜೀವನ ನಡೆಸಿ ಎನ್ನುವ ಸಂದೇಶವನ್ನು ಹಿರಿಯೂರು ಜನತೆಗೆ ನೀಡಿದ್ದಾರೆ.