ಚಿತ್ರದುರ್ಗದಲ್ಲಿ ಎಷ್ಟು ಸಕ್ರಿಯ ಪ್ರಕರಣಗಳಿವೆ; ಸೀಲ್ ಡೌನ್ ಆದ ಪ್ರದೇಶಗಳು ಯಾವುವು?
ಚಿತ್ರದುರ್ಗ, ಜೂನ್ 25: ಚಿತ್ರದುರ್ಗದಲ್ಲಿ ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯ ಹಿರಿಯೂರಿನ ವೇದಾವತಿ ನಗರದ 65 ವರ್ಷದ ಕಿರಾಣಿ ಅಂಗಡಿ ಮಾಲೀಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೊನ್ನೆ ವೃದ್ಧನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿಲಾಗಿದ್ದು ಇದೀಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Recommended Video
ಈಗಾಗಲೇ ಹಿರಿಯೂರು ನಗರದಲ್ಲಿ ಓರ್ವ ವೈದ್ಯ ಮತ್ತು ತಾಯಿ, ಮಗ ಸೇರಿದಂತೆ ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಮತ್ತೊಂದು ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ತಾಲೂಕಿನ ಜನತೆಯನ್ನು ಆತಂಕಕ್ಕೆ ದೂಡಿದೆ.
ಜಿಲ್ಲೆಯಲ್ಲಿ ಒಟ್ಟು 47 ಕೊರೊನಾ ವೈರಸ್ ಪ್ರಕರಣಗಳು
ಇದೇ ಜೂನ್ 19ರಂದು ಈತನ ಮನೆಯಲ್ಲಿ ಮೊಮ್ಮಗನ ಹುಟ್ಟು ಹಬ್ಬ ಆಚರಣೆ ಮಾಡಿದ್ದು, ಈತನ ಸಂಪರ್ಕಕ್ಕೆ ಸುಮಾರು 20ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಇದರಿಂದ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟು ಜಿಲ್ಲೆಯಲ್ಲಿ 47 ಕೊರಾನಾ ಪಾಸಿಟಿವ್ ಪ್ರಕರಣಗಳಿದ್ದು ಅದರಲ್ಲಿ 42 ಸೋಂಕಿತರು ಗುಣಮುಖರಾಗಿದ್ದಾರೆ. 4 ಪ್ರಕರಣಗಳು ಸಕ್ರಿಯವಾಗಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಸೋಂಕಿತ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಉಳಿದಂತೆ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ 4 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗದಲ್ಲಿ ಆಯುರ್ವೇದ ವೈದ್ಯನಿಗೆ ಕೊರೊನಾ ವೈರಸ್
ಸೋಂಕಿತರ ಪ್ರದೇಶ ಸೀಲ್ ಡೌನ್
29 ವರ್ಷದ ಮಹಿಳೆ ಹಾಗೂ ಆಕೆಯ 8 ವರ್ಷದ ಮಗನಿಗೆ ಕೊರೊನಾ ವೈರಸ್ ಪಾಸಿಟಿವ್ ಕೇಸ್ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಹಿರಿಯೂರಿನ ಆಜಾದ್ ನಗರದ 200 ಮೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಆಂಜನೇಯಸ್ವಾಮಿ, ತೇರುಮಲ್ಲೇಶ್ವರ ದೇವಸ್ಥಾನ, ಮಟನ್ ಮಾರ್ಕೆಟ್, ಬಂದಮ್ಮ ರಸ್ತೆ ಹಾಗೂ ಸೋಂಕಿತರ ಮನೆಯ ಸುತ್ತಮುತ್ತಲ ಪ್ರದೇಶ, ವೇದಾವತಿ ನಗರದ ಆಯುಷ್ ವೈದ್ಯ , 65 ವರ್ಷದ ಕಿರಾಣಿ ಅಂಗಡಿ ಮಾಲೀಕನ ಮನೆ ಪ್ರದೇಶ, ಮಾರುತಿ ಸ್ಕೂಲ್ ರಸ್ತೆ, ಬೇವಿನ ಮರದ ರಸ್ತೆ ಸೇರಿದಂತೆ ಹಿರಿಯೂರು ನಗರದಲ್ಲಿ ಮುಂಜಾಗೃತಾ ಕ್ರಮವಾಗಿ ಸೋಂಕಿತರ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ತಾಲೂಕು ಕೇಂದ್ರದಲ್ಲಿ 4 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಹಿರಿಯೂರು ನಗರದ ಜನರಲ್ಲಿ ಕೊರೊನಾ ಸೋಂಕಿನ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜನತೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಹಿರಿಯೂರು ತಾಲ್ಲೂಕಿನಲ್ಲಿ ಕೊರೊನಾ ಕರಿನೆರಳು ಆವರಿಸಿದ್ದು, ತಾಲೂಕಿನ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಹಿರಿಯೂರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಕಿರಾಣಿ ಅಂಗಡಿ ಮಾಲೀಕನಿಂದ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಸೋಂಕನ್ನು ನಿಯಂತ್ರಣ ಮಾಡಲು ಕ್ಷೇತ್ರದ ಶಾಸಕರು, ತಾಲೂಕು ಆಡಳಿತ, ನಗರಸಭೆ, ಪೊಲೀಸ್ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಗರದಲ್ಲಿ ಮನೆಯಿಂದ ಹೊರಗಡೆ ಬಂದು ಸುಖಾಸುಮ್ಮನೆ ತಿರುಗಾಡುವವರು ಮತ್ತು ಹಳ್ಳಿಯಿಂದ ನಗರಕ್ಕೆ ಬರುವ ಜನರನ್ನು ನಿಯಂತ್ರಿಸಬೇಕಾಗಿರುವ ಕೆಲಸ ಮೊದಲು ಆಗಬೇಕಿದೆ.
ನಗರ ಸಭೆ ಇಲಾಖೆಯೂ ಚುರುಕಾಗಬೇಕು
ನಗರಸಭೆ ಇಲಾಖೆಯಿಂದ ಮತ್ತೊಮ್ಮೆ ನಗರದ ಸುತ್ತಮುತ್ತ ರಾಸಾಯನಿಕ ಸಿಂಪಡಣೆ ಮಾಡಬೇಕು. ಸಂಜೆ ಆಗುತ್ತಿದ್ದಂತೆ ನಗರದ ಚಳ್ಳಕೆರೆ ರಸ್ತೆಯ ಟಿ.ಬಿ. ಸರ್ಕಲ್ ಬಳಿ ಬೇರೆಡೆಯಿಂದ ಬಂದ ಲಾರಿ, ಕಾರು, ಆಟೋ ಇತರೆ ಗೂಡ್ಸ್ ವಾಹನಗಳನ್ನು ನಿಲ್ಲಿಸುತ್ತಿದ್ದು ಅವುಗಳನ್ನು ತೆರವುಗೊಳಿಸಬೇಕಿದೆ. ಬೇರೆಡೆಯಿಂದ ಬಂದ ವಾಹನಗಳನ್ನು ನಗರದ ಒಳಗೆ ಬಿಡದಂತೆ ಎಚ್ಚರ ವಹಿಸಬೇಕು. ಇದರ ಜೊತೆಗೆ ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.