ಕೊರೊನಾ ಎಫೆಕ್ಟ್: ತರಕಾರಿ ಬೆಳೆದು ಕಂಗಾಲಾದ ಚಿತ್ರದುರ್ಗ ರೈತ
ಚಿತ್ರದುರ್ಗ, ಏಪ್ರಿಲ್ 05: ಚಿತ್ರದುರ್ಗದ ರೈತರು ಈ ಬಾರಿ ಮಹಾಮಾರಿ ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ನಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಐದಾರು ವರ್ಷಗಳ ಕಾಲ ಮಳೆ ಇಲ್ಲದೆ ಬರಗಾಲಕ್ಕೆ ರೈತರು ತತ್ತರಿಸಿದ್ದಾರೆ.
ಈ ಬಾರಿ ಕೊರೊನಾ ವೈರಸ್ ಸೋಂಕು ಆವರಿಸಿಕೊಂಡು ತಿಂಗಳು ಕಳೆಯುತ್ತಾ ಬಂದಿದೆ. ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಇತ್ತ ರೈತರು ತರಕಾರಿ ಬೆಳೆದು, ನಿಗದಿತ ಸಮಯದಲ್ಲಿ ಮಾರುಕಟ್ಟೆ ತಲುಪದೆ ಲಕ್ಷಾಂತರ ಮೌಲ್ಯದ ತರಕಾರಿ ನಷ್ಟ ಅನುಭವಿಸಿದ್ದಾನೆ.
15 ಎಕರೆ ತೋಟದಲ್ಲಿ ಕೊಳೆಯುತ್ತಿದೆ ಮಲ್ಲಿಗೆ, ಗುಲಾಬಿ, ಪಪ್ಪಾಯ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ-ಗೊಲ್ಲರಹಟ್ಟಿ ಗ್ರಾಮದ ರೈತ ಈರಣ್ಣ 25 ಎಕರೆಯಲ್ಲಿ ತರಕಾರಿ ಬೆಳೆದು ಸಂಕಷ್ಟಕ್ಕೆ ಸಿಲುಕಿರುವ ರೈತ. ಈರಣ್ಣ 10 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ನಿಗದಿತ ಸಮಯದಲ್ಲಿ ಮಾರುಕಟ್ಟೆ ತಲುಪಿಸಲು ಸಾಧ್ಯವಾಗಿಲ್ಲ.
ಮತ್ತೊಂದು ಕಡೆ 10 ಎಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದು, ಖರೀದಿದಾರರು ಬರದ ಕಾರಣ ಹೊಲದಲ್ಲಿ ಬಿಟ್ಟಿದ್ದಾರೆ. ಅದೆ ರೀತಿ 5 ಎಕರೆಯಲ್ಲಿ ಆಗಲಕಾಯಿ ಬೆಳೆದು ಮಾರಾಟ ಮಾಡಲು ಸಾಧ್ಯವಾಗಿಲ್ಲ. 500 ಕುರಿ ಸಾಕಿಕೊಂಡಿದ್ದ ಈರಣ್ಣ ಕುರಿ ಮಾರಿ, ವ್ಯವಸಾಯಕ್ಕೆ ಕೈ ಹಾಕಿ ಲಕ್ಷಾಂತರ ರುಪಾಯಿ ಮೌಲ್ಯದ ತರಕಾರಿ ಬೆಳೆದು ಕೈ ಸುಟ್ಟುಕೊಂಡಿರುವುದಕ್ಕೆ ರೈತ ಈರಣ್ಣನೆ ಸಾಕ್ಷಿ.
ಈ ಕುರಿತು ಮಾತನಾಡಿದ ರೈತ ಈರಣ್ಣ 400-500 ಕುರಿಕಾದುಕೊಂಡಿದ್ದೆ, ಕುರಿಗಳನ್ನು ಮಾರಿ ಕೃಷಿ ಕಡೆ ಮುಖ ಮಾಡಿದ್ದು, ಕಳೆದ ಎಂಟು ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಈ ವರ್ಷ ಸುಮಾರು 10 ಲಕ್ಷ ಖರ್ಚ್ ಮಾಡಿ ಟೊಮೋಟೊ, ಕುಂಬಳಕಾಯಿ, ಆಗಲಕಾಯಿ ಬೆಳೆದಿದ್ದು, ಕೊರೊನಾ ಸೋಂಕು ಬಂದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವ ಸ್ಥಿತಿಯಲ್ಲಿದ್ದೇನೆ ಎಂದರು.