ಕುರಿ ಕಳೆದುಕೊಂಡ ಹಿರಿಯೂರಿನ ರೈತನಿಗೆ ಪರಿಹಾರ ನೀಡಿದ ಸಾಸಲು ಸತೀಶ್
ಚಿತ್ರದುರ್ಗ, ಮೇ 25: ಈಚೆಗೆ ವಿಷಪೂರಿತ ಖರ್ಬೂಜ ತಿಂದು 50 ಕುರಿಗಳು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ ಗುಡ್ಡದ ಗ್ರಾಮದಲ್ಲಿ ನಡೆದಿದ್ದು, ಕುರಿಗಳನ್ನು ಕಳೆದುಕೊಂಡ ರಾಮಕೃಷ್ಣಪ್ಪ ಕುಟುಂಬಕ್ಕೆ ಕಾಡುಗೊಲ್ಲ ಸಮಾಜದ ಯುವ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಡಾ. ಸಾಸಲು ಸತೀಶ್ 54 ಸಾವಿರ ವೈಯಕ್ತಿಕ ಪರಿಹಾರ ನೀಡಿ ಸಾಂತ್ವನ ಹೇಳಿದರು.
Recommended Video
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ ಗುಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ ರಾಮಕೃಷ್ಣಪ್ಪ ಎರಡು ಎಕರೆಯಲ್ಲಿ ಖರ್ಬೂಜ ಬೆಳೆದಿದ್ದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರಿಂದ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದ ಕಾರಣ ಖರ್ಬೂಜ ಬೆಳೆಗೆ ತನ್ನ ಕುರಿಗಳನ್ನು ಬಿಟ್ಟು ಮೇಯಿಸಿದ್ದರು. ಕೊಳೆತ ಖರ್ಬೂಜ ತಿಂದಿದ್ದರಿಂದ ಸುಮಾರು 54ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದವು.
ಹಿರಿಯೂರಿನ ಹೊಲದಲ್ಲಿ ಕೊಳೆತ ಖರ್ಬೂಜ ತಿಂದು 50 ಕುರಿಗಳ ಸಾವು
ಇಂದು ವೇಣುಕಲ್ ಗುಡ್ಡ ಗ್ರಾಮಕ್ಕೆ ಭೇಟಿ ನೀಡಿದ ಡಾ. ಸಾಸಲು ಸತೀಶ್ ವೈಯಕ್ತಿಕ ಪರಿಹಾರ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, "ನಾನು ಕುರಿಗಾಯಿ ಕುಟುಂಬದಿಂದ ಬಂದವನಾಗಿದ್ದು, ಕುರಿಗಾಹಿಗಳ ಕಷ್ಟ ಏನಂತ ಗೊತ್ತಿದೆ. ಕಾಡುಗೊಲ್ಲರಿಗೆ ಕುರಿ ಸಾಕಾಣಿಕೆಯೇ ಬದುಕು. ಕುರಿಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಸರ್ಕಾರದಿಂದ ಪರಿಹಾರ ನೀಡುತ್ತಿದ್ದರು. ಸರ್ಕಾರದಿಂದ 5 ಸಾವಿರ ಸಿಗುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಆದರೆ ಈಗಿನ ಸರ್ಕಾರ ಅದನ್ನೂ ರದ್ದುಗೊಳಿಸಿತ್ತು. ಈ ಕುರಿತು ಹೋರಾಟ ಮಾಡಿ ಮತ್ತೆ ಆ ಪರಿಹಾರವನ್ನು ಮುಂದುವರೆಸಲಾಯಿತು. ಕುರಿಗಾಹಿಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಗೊಲ್ಲರಹಟ್ಟಿಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು" ಎಂದು ಆಗ್ರಹಿಸಿದರು.