ಚಳ್ಳಕೆರೆ; ಪ್ರತಿಭಟನೆಯಲ್ಲಿ ಬೆಂಕಿ ತಗುಲಿ 8 ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯ
ಚಳ್ಳಕೆರೆ, ಸೆಪ್ಟೆಂಬರ್ 4: ನಗರದ ನೆಹರು ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಯಲ್ಲಿ ಇಡಿ ಅಧಿಕಾರಿಗಳು ಬಂಧಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿದಂತೆ ಬಿಜೆಪಿ ವಿರುದ್ಧ ಪ್ರತಿಭಟನೆ ತೀವ್ರವಾಗಿದೆ.
ಚಳ್ಳಕೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆಹರು ವೃತ್ತದಲ್ಲಿ ಪ್ರತಿಭಟನೆ ನೆಪದಲ್ಲಿ ನಾಲ್ಕು ಟೈರ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಸಮಯದಲ್ಲಿ ಬೆಂಕಿ ಗಾಳಿಯಿಂದ ಹರಡಿ ಅಲ್ಲಿದ್ದ ಕಾರ್ಯಕರ್ತರಿಗೆ ತಗುಲಿದೆ. ಇದರಿಂದ ಎಂಟು ಜನರು ಗಾಯಗೊಂಡಿದ್ದಾರೆ.
ಲಿಂಗಮ್ಮ, ಸೈಯದ್ ಕರೀಂ, ಶಂಕರಪ್ಪ, ಶಿವರಾಜ್, ಮಂಜುನಾಥ, ಸಿ.ಬಿ. ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನಪ್ಪ, ತಿಪ್ಪೇಸ್ವಾಮಿ ಮತ್ತು ಚಳ್ಳಕೆರೆ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್, ಅಣ್ಣಪ್ಪ ನಾಯಕ ಇವರಿಗೆ ಗಾಯಗಳಾಗಿವೆ. ಶಂಕರಪ್ಪ ಎಂಬುವರ ಬೆನ್ನಿನ ಭಾಗಕ್ಕೆ ಹೆಚ್ಚಿನ ಸುಟ್ಟ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.