ಚಿತ್ರದುರ್ಗ ಲೋಕಸಮರ:ಇವರಿಬ್ಬರಲ್ಲಿ ದುರ್ಗದ ಹುಲಿಯಾಗುವವರು ಯಾರು?
ಚಿತ್ರದುರ್ಗ, ಮಾರ್ಚ್ 26:ಕೋಟೆ ನಾಡು ಚಿತ್ರದುರ್ಗದಲ್ಲಿ ದಿನ ಕಳೆದಂತೆ ಬಿಸಿಲಿನ ತಾಪ ಹೆಚ್ಚುವುದರ ಜೊತೆಗೆ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಮೈತ್ರಿ ಸರ್ಕಾರದ ಅಭ್ಯರ್ಥಿ ಹಾಗೂ ಕಾಂಗ್ರೆಸ್ ನ ಹಾಲಿ ಸಂಸದರಾಗಿರುವ ಬಿ.ಎನ್. ಚಂದ್ರಪ್ಪ, ಬಿಜೆಪಿ ಅಭ್ಯರ್ಥಿ ಆನೇಕಲ್ ಎ.ನಾರಾಯಣಸ್ವಾಮಿ ಈಗಾಗಲೇ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ಬಾರಿ ಕಾಂಗ್ರೆಸ್ ನ ಬಿ.ಎನ್. ಚಂದ್ರಪ್ಪ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಜನಾರ್ಧನಸ್ವಾಮಿ ಅವರನ್ನು ಸೋಲಿಸಿದ್ದರು. ಇದೀಗ ಈ ಬಾರಿಯೂ ಮಾಜಿ ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ ಮತ್ತು ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮುಖಾಮುಖಿಯಾಗಿದ್ದಾರೆ.
ಚಂದ್ರಪ್ಪ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗೂಂಡುರಾವ್, ಎಚ್. ಕೆ. ಪಾಟೀಲ್, ಸಚಿವ ವೆಂಕಟರಮಣಪ್ಪ ಸೇರಿದಂತೆ ಮಾಜಿ ಹಾಗೂ ಹಾಲಿ ಶಾಸಕರು, ಸಂಸದರು ಜೆಡಿಎಸ್ ಮತ್ತು ಕಾಂಗ್ರೆಸ್ ಅಪಾರ ಕಾರ್ಯಕರ್ತರು ಹಾಜರಿದ್ದರು.
ಚಿತ್ರದುರ್ಗದಲ್ಲಿ ಬಿ.ಎನ್. ಚಂದ್ರಪ್ಪ ಸ್ಪರ್ಧೆ:ಮಾ.25 ರಂದು ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿ ಎ. ನಾರಾಯಣ ಸ್ವಾಮಿ ಕೂಡ ಇಂದು ಮಂಗಳವಾರ (ಮಾ.26) ನಾಮಪತ್ರ ಸಲ್ಲಿಸಿದ್ದು, ಬಿ.ಎಸ್. ಯಡಿಯೂರಪ್ಪ, ಜಿಲ್ಲೆಯ ಶಾಸಕರಾದ ಶ್ರೀರಾಮುಲು, ಜಿ.ಎಚ್. ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಚಂದ್ರಪ್ಪ, ಕೆ. ಪೂರ್ಣಿಮಾ ನಾರಾಯಣಸ್ವಾಮಿ ಸಾಥ್ ನೀಡಿದರು. ಮುಂದೆ ಓದಿ...
ಯಾರಿಗೆ ಬೆಂಬಲಿಸುತ್ತಾರೆ?
ಚಿತ್ರದುರ್ಗ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಎರಡು ಕಡೆ ಕಾಂಗ್ರೆಸ್, ಒಂದು ಕಡೆ ಜೆಡಿಎಸ್ ಶಾಸಕರಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಬೋವಿ ಸಮಾಜಕ್ಕೆ ಟಿಕೆಟ್ ನೀಡಿಲ್ಲ ಅಂತ ಸಿಡಿದೆದ್ದಿದ್ದಿರುವ ಬೋವಿ ಸಮುದಾಯದವರು ಯಾರಿಗೆ ಬೆಂಬಲಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.ಕೋಟೆನಾಡಿನಲ್ಲಿ ಪುನಃ ಹೊರಗಿನವರಿಗೆ ಟಿಕೆಟ್ ನೀಡಿದ ಬಿಜೆಪಿ!
ಕುತೂಹಲ ಮೂಡಿಸಿದ ಶಾಸಕರ ನಡೆ
ಈ ಹಿಂದೆ ಹೊಸದುರ್ಗ ಮತ್ತು ಹೊಳಲ್ಕೆರೆ ಶಾಸಕರು ಬಿಜೆಪಿಗೆ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಯಲ್ಲಿ ಇಬ್ಬರು ಶಾಸಕರು ಜೊತೆಗಿದ್ದಿದ್ದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಇಬ್ಬರು ಅಭ್ಯರ್ಥಿಗಳು ಹೊಸಬರು
ಲೋಕಸಭಾ ಅಭ್ಯರ್ಥಿಗಳು ಹೊರಗಿನವರೇ ಆಗಿದ್ದು, ಚಂದ್ರಪ್ಪ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ. ಹಾಗೆಯೇ ನಾರಾಯಣಸ್ವಾಮಿ ಬೆಂಗಳೂರಿನ ಆನೇಕಲ್ ಭಾಗದವರು. ಆದರೆ ಚಂದ್ರಪ್ಪನವರಿಗೆ ಜಿಲ್ಲೆಯಲ್ಲಿ ಐದು ವರ್ಷದ ಅನುಭವ ಇರುವುದರಿಂದ ಅವರಿಗೆ ಹೊಸತೆನಿಸುವುದಿಲ್ಲ. ಕ್ಷೇತ್ರದ ಜನರ ನಾಡಿ ಮಿಡಿತಗಳನ್ನ ಅರ್ಥಮಾಡಿಕೊಂಡಿದ್ದಾರೆ. ಮತದಾರ ಯಾರ ಕಡೆ ಇದ್ದಾನೆ ಎಂಬುದಕ್ಕೆ ಮೇ 23 ರವರೆಗೆ ಕಾಯಲೇಬೇಕು.
ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಮಾತು
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಗಳಿಸಿದ್ದ ಬಿ.ಎನ್. ಚಂದ್ರಪ್ಪ ಎರಡನೆ ಬಾರಿಗೆ ಕಣಕ್ಕೆ ಇಳಿದಿದ್ದಾರೆ.ಜಿಲ್ಲೆಯಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಚಂದ್ರಪ್ಪ ಜನ ಸಮಾನ್ಯರಂತೆ ಓಡಾಡಿಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಿಸಿದ್ದಾರೆ ಎನ್ನಲಾಗಿದೆ. ಅಭಿವೃದ್ಧಿಯ ಹರಿಕಾರ ಎಂದು ಕರೆಸಿಕೊಳ್ಳುವ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ನವರನ್ನು ಮತ್ತೆ ಮತದಾರರು ಕೈ ಹಿಡಿಯುತ್ತಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.