ಚಿತ್ರದುರ್ಗ; ಆನ್ ಲೈನ್ ನಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಉದ್ಘಾಟಿಸಿದ ಸಿಎಂ
ಚಿತ್ರದುರ್ಗ, ಸೆಪ್ಟೆಂಬರ್ 9: ಶ್ರೀ ಮುರುಘರಾಜೇಂದ್ರ ಮಠವು ಕೋವಿಡ್-19 ಸಂದರ್ಭದಲ್ಲಿ ನಿರಾಶ್ರಿತರಿಗೆ ಹಲವು ರೀತಿಯ ಜನೋಪಯೋಗಿ ಕಾರ್ಯಗಳನ್ನು ಮಾಡಿದೆ ಎಂದು ಶ್ಲಾಘಿಸಿದರು ಸಿಎಂ ಯಡಿಯೂರಪ್ಪ.
ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಟೆಸ್ಟ್ ಸೆಂಟರ್ ಅನ್ನು ಅಂತರ್ಜಾಲದ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, "ಚಿತ್ರದುರ್ಗ ಇಂದು ಎಲ್ಲರ ಗಮನ ಸೆಳೆದಿರುವುದು ಡಾ. ಶಿವಮೂರ್ತಿ ಮುರುಘಾ ಶರಣರ ಸೇವೆಯಿಂದ. ಕೊರೊನಾದಂಥ ಸಂಕಷ್ಟದ ಸಂದರ್ಭದಲ್ಲಿ ಮುರುಘಾ ಶರಣರು 10 ರಿಂದ 12 ಸಾವಿರ ಕೋವಿಡ್ ನಿರಾಶ್ರಿತ ಕುಟುಂಬಗಳಿಗೆ ದವಸ-ಧಾನ್ಯ ವಿತರಿಸುವ ಮೂಲಕ ಹಾಗೂ ಅನ್ನದಾಸೋಹ ಏರ್ಪಡಿಸುವ ಮೂಲಕ 50 ರಿಂದ 60 ಲಕ್ಷ ರೂ.ಗಳನ್ನು ವ್ಯಯಿಸಿ ನೆರವಿಗೆ ಧಾವಿಸಿದ್ದರು. ಇದೀಗ ಮತ್ತೊಂದು ಹೆಜ್ಜೆಯನ್ನು ಮುರುಘಾ ಶರಣರು ಇರಿಸಿದ್ದು, ಕೊರೊನಾ ಅತಿವೇಗದಲ್ಲಿ ವ್ಯಾಪಿಸುತ್ತಿರುವ ಈ ಸಂದರ್ಭ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ" ಎಂದು ಶ್ಲಾಘಿಸಿದರು.
ಚಿತ್ರದುರ್ಗ: ಬಸವೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಆರಂಭ
ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ 25ಕ್ಕೂ ಹೆಚ್ಚು ವೆಂಟಿಲೇಟರ್ ಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ದಿನದ 24 ಗಂಟೆಯೂ ಕೋವಿಡ್ ಟೆಸ್ಟ್ ನಡೆಯಲಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, "ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ವಿಧದ ಸಮಸ್ಯೆಗಳಿವೆ. ಮುಖ್ಯಮಂತ್ರಿಗಳು ನಮ್ಮೊಟ್ಟಿಗೆ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಕೋರಿದ್ದರು. ಅವರ ಸಲಹೆಯಂತೆ ನಾವು ಕೋವಿಡ್ ಟೆಸ್ಟ್ ಸೆಂಟರ್ ಸ್ಥಾಪಿಸಿದ್ದು, ಅವರಿಂದಲೇ ಲೋಕಾರ್ಪಣೆ ಮಾಡಿಸುತ್ತಿರುವುದು ಸಂತಸ ತಂದಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು" ಎಂದರು.
Recommended Video
ಈ ಸಂದರ್ಭ ಶಾಸಕ ಟಿ. ರಘುಮೂರ್ತಿ, ಎಂಎಲ್ ಸಿ ರಘು ಆಚಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.