ಕೋಟೆನಾಡಲ್ಲಿ ಮಠಾಧೀಶರು, ಜನರಿಂದ ಕರ್ಫ್ಯೂಗೆ ಚಪ್ಪಾಳೆ
ಚಿತ್ರದುರ್ಗ, ಮಾರ್ಚ್ 22: ಇಂದು ದೇಶಾದ್ಯಂತ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜನತೆ ಈ ದಿನ ನಿಸ್ವಾರ್ಥ ಸೇವೆ ಸಲ್ಲಿಸಿದ ಆಸ್ಪತ್ರೆ, ಡಾಕ್ಟರ್, ನರ್ಸ್, ಪೊಲೀಸ್ ಸಿಬ್ಬಂದಿಗೆ ಘಂಟೆ ಬಾರಿಸಿ ಮತ್ತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಸಲ್ಲಿಸಿದರು.
ಹೊಸದುರ್ಗ ಮಠದ ಶ್ರೀ ಡಾ.ಶಾಂತವೀರ ಸ್ವಾಮೀಜಿ ಘಂಟೆ ಬಾರಿಸುವ ಮೂಲಕ ಧನ್ಯವಾದ ಸಲ್ಲಿಸಿದರು. ಸಿರಿಗೆರೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಹ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಚಿತ್ರದುರ್ಗ ನಗರದಲ್ಲಿ ಸಹ ಪೋಲಿಸರು ಜನತಾ ಕರ್ಫ್ಯೂಗೆ ಚಪ್ಪಾಳೆಯ ಧನ್ಯವಾದ ಸಲ್ಲಿಸಿದರು.
Live Updates: ಜನತಾ ಕರ್ಫ್ಯೂ: ಸಿಂಗಪುರದಲ್ಲೂ ಕಂಡು ಬಂದ ಚಪ್ಪಾಳೆ ಗೌರವ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಜನತಾ ಕರ್ಫ್ಯೂಗೆ ಬಾರಿ ಬೆಂಬಲ ಸೂಚಿಸಿದರು. ಹಿರಿಯೂರಿನಲ್ಲಿ ಜನತೆ ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ಶಂಖ, ಜಾಗಟೆ ಬಾರಿಸುವ ಮೂಲಕ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಇಂದು ಕರೆ ನೀಡಿದ್ದ ಬಂದ್ ಗೆ ಅಭಿನಂದನೆ ಸಲ್ಲಿಸಿದರು.
ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಸಹ ಕೊರೊನಾ ತಡೆಗಟ್ಟಲು ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಕುಟುಂಬ ಸಮೇತರಾಗಿ ಅಭಿನಂದನೆ ಸಲ್ಲಿಸಿದ ದೃಶ್ಯ ಕಂಡುಬಂದವು.
ಬೆಳಿಗ್ಗೆಯಿಂದಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಜನತೆ ಮನೆಯಿಂದ ಹೊರಗೆ ಬರದೇ ಮನೆಯಲ್ಲಿಯೇ ಉಳಿದಿದ್ದರು. ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.