ಹೊಸ ಮುಖಕ್ಕೆ ಮಣೆ ಹಾಕಿದ ಚಿತ್ರದುರ್ಗದ ಮತದಾರ
ಚಿತ್ರದುರ್ಗ, ಮೇ 23: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವಲಸಿಗರ ತಾಣವೆಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಈ ಹಿಂದಿನ ಎಲ್ಲ ಚುನಾವಣಾ ಫಲಿತಾಂಶ ಗಮನಿಸಿದರೆ, ಬಹುತೇಕ ವಲಸಿಗರೇ ಇಲ್ಲಿ ವಿಜಯ ಸಾಧಿಸಿದ್ದಾರೆ.
ಅದರಲ್ಲೂ ಅಚ್ಚರಿಯೆಂಬಂತೆ ಕೇವಲ 15-20 ದಿನಗಳಲ್ಲಿಯೇ ಕ್ಷೇತ್ರಕ್ಕೆ ಬಂದು ಎಂಪಿ ಆದವರ ಸಂಖ್ಯೆ ಹೆಚ್ಚಿದೆ. ನಟ ಶಶಿಕುಮಾರ್, ಪಿ.ಕೋದಂಡರಾಮಯ್ಯ,.ಬಿ.ಎನ್.ಚಂದ್ರಪ್ಪ, ಜನಾರ್ದನಸ್ವಾಮಿ ಸೇರಿದಂತೆ ಇವರೆಲ್ಲರೂ ಕ್ಷೇತ್ರಕ್ಕೆ ದಿಢೀರನೆ ಟಿಕೆಟ್ ತಂದು ಗೆಲುವು ಕಂಡವರು. ಈ ಲೋಕಸಭಾ ಚುನಾವಣೆಯಲ್ಲಿ ಈ ಮಾತಿಗೆ ಮತ್ತೊಂದು ಉದಾಹರಣೆ ದೊರೆತಿದೆ.
ಆನೇಕಲ್ ಕ್ಷೇತ್ರದ ನಾರಾಯಣಸ್ವಾಮಿ ಮುನ್ನಡೆ
ಈ ಬಾರಿಯೂ ಸ್ಥಳೀಯ ವ್ಯಕ್ತಿಗೆ ಟಿಕೆಟ್ ಕೊಡಬೇಕೆಂಬ ಕೂಗು ಚಿತ್ರದುರ್ಗದಲ್ಲಿ ಜೋರಾಗಿತ್ತು. ಇದೆಲ್ಲದರ ನಡುವೆಯೂ ದಿಢೀರನೆ ಟಿಕೆಟ್ ಗಿಟ್ಟಿಸಿಕೊಂಡು ಕ್ಷೇತ್ರಕ್ಕೆ ಕಾಲಿಟ್ಟವರು ಆನೇಕಲ್ ಕ್ಷೇತ್ರದ .ಎ.ನಾರಾಯಣಸ್ವಾಮಿ. ಇದೀಗ ಕೇವಲ 25 ದಿನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿರುವುದು ಅಚ್ಚರಿ ತಂದಿದೆ.
ಈ ಮೂಲಕ ಚಿತ್ರದುರ್ಗದ ಜನ ವಲಸಿಗರು, ಹೊಸ ಮುಖಕ್ಕೆ ಮಣೆ ಹಾಕುತ್ತಾರೆ ಎಂಬ ಮಾತೂ ಮತ್ತೆ ನಿಜವಾಗಿದೆ.
ಹುಸಿಯಾದ ದಾಖಲೆ ಸೃಷ್ಟಿಸುವ ಚಂದ್ರಪ್ಪ ಭರವಸೆ
ಸರಳ-ಸಜ್ಜನಿಕೆ ಹಾಗೂ ಜೆಡಿಎಸ್ ಪಕ್ಷದೊಂದಿಗಿನ ಮೈತ್ರಿ ಕೈಹಿಡಿಯಲಿದೆ ಎಂದು ನಂಬಿದ್ದ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಅಚ್ಚರಿ ರೀತಿಯಲ್ಲಿ ಸೋಲು ಕಂಡಿದ್ದಾರೆ. ಮೂಡಲಗಿರಿಯಪ್ಪ ನಂತರ ಮರು ಆಯ್ಕೆ ಅದೃಷ್ಟ ಇಲ್ಲಿಯವರೆಗೂ ಇರಲಿಲ್ಲ. ಆದರೆ, ಹಾಲಿ ಸಂಸದ ಚಂದ್ರಪ್ಪ ಮರು ಆಯ್ಕೆ ಆಗುವ ಮೂಲಕ ದಾಖಲೆ ಸೃಷ್ಟಿಸಲಿದ್ದಾರೆ ಎಂಬ ಭರವಸೆ ಸುಳ್ಳಾಗಿದೆ. ಬಿ.ಎನ್.ಚಂದ್ರಪ್ಪ ಅವರು ಮೈತ್ರಿ ಕಾರಣಕ್ಕೆ ಅತ್ಯಂತ ಆತ್ಮವಿಶ್ವಾಸದಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚು ಅಂದರೆ ಒಂದೂವರೆ ಲಕ್ಷಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸ ಸೋಲಿಗೆ ಕಾರಣವಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ತಲೆಕೆಳಗಾದ ಮೈತ್ರಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಐವರು ಬಿಜೆಪಿ ಶಾಸಕರು, ಇಬ್ಬರು ಕಾಂಗ್ರೆಸ್ ಶಾಸಕರು, ಒಬ್ಬರು ಜೆಡಿಎಸ್ ಶಾಸಕರಿದ್ದರು. ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು, ಪಾವಗಡ, ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಮತ ಪಡೆಯುತ್ತದೆ ಎಂಬ ಮೈತ್ರಿ ಪಕ್ಷದ ಮುಖಂಡರ ಲೆಕ್ಕಾಚಾರ ಪಾವಗಡ ಹೊರತುಪಡಿಸಿ ಉಳಿದೆಡೆ ತಲೆಕೆಳಗಾಗಿದೆ.
ಹೊಸದುರ್ಗದಲ್ಲಿ ಸಮಬಲದಲ್ಲಿ ಮತಗಳಿಕೆ ಆಗಲಿದೆ ಎಂಬ ಭರವಸೆಯೂ ಸುಳ್ಳಾಗಿದ್ದು, ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಹೆಚ್ಚೂಕಡಿಮೆ ಮರುಕಳಿಸಿದೆ.
ಮೋದಿ ಅಲೆ, ಬಿಎಸ್ವೈ ನಾಯಕತ್ವದ ಬೆಂಬಲ?
ಕೇವಲ 15 ದಿನದಲ್ಲಿ ಪ್ರಚಾರದ ಅಖಾಡಕ್ಕಿಳಿದ ಎ.ನಾರಾಯಣಸ್ವಾಮಿಗೆ ಮೋದಿ ಅಲೆ ಹಾಗೂ ಬಿಎಸ್ ವೈ ನಾಯಕತ್ವ ಗೆಲುವಿಗೆ ಹೆಚ್ಚು ಸಹಕಾರ ಆಗಿದೆ.