Vani Vilasa Sagara : 89 ವರ್ಷಗಳ ನಂತರ ಕೋಟೆ ನಾಡಿಗೆ ಚೈತನ್ಯ ತಂದ ವಾಣಿ ವಿಲಾಸ ಜಲಾಶಯ
ಚಿತ್ರದುರ್ಗ ಸೆಪ್ಟೆಂಬರ್ 3: ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಅಣೆಕಟ್ಟು ಎಂದು ಕರೆಸಿಕೊಳ್ಳುವ ವಾಣಿ ವಿಲಾಸ ಜಲಾಶಯ ಬರೋಬ್ಬರಿ 89 ವರ್ಷಗಳ ನಂತರ ಐತಿಹಾಸಿಕ 2ನೇ ಬಾರಿಗೆ ಗುರುವಾರ ರಾತ್ರಿ ಕೋಡಿ ಬೀಳುವ ಮೂಲಕ ಇತಿಹಾಸ ಸೃಷ್ಟಿಸಿದರೆ ಇತ್ತ ಜಿಲ್ಲೆಯ ಜನತೆಯ ಮೊಗದಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ಈ ಮಾರಿಕಣಿವೆ ಅಣೆಕಟ್ಟು ಗುರುವಾರ ಸಂಜೆ 7 ಗಂಟೆ ಸುಮಾರಿಗೆ 130 ಅಡಿ ನೀರು ಗುರಿ ತಲುಪುವ ಮೂಲಕ ಹಾರನಕಣಿವೆ ರಂಗನಾಥಸ್ವಾಮಿ ದೇವಸ್ಥಾನ ಸಮೀಪದ ಕೋಡಿ ಕಟ್ಟೆಯ ಭಾಗದಲ್ಲಿ ನೀರು ನಿಧನವಾಗಿ ಹರಿಯುವ ಮೂಲಕ ಕೋಡಿ ಬೀಳಲು ಆರಂಭಿಸಿದ ಬಳಿಕ ಮಧ್ಯರಾತ್ರಿ ಸಂಪೂರ್ಣ ಕೋಡಿ ತುಂಬಿ ಹರಿದಿದ್ದು, ಶುಕ್ರವಾರ ಬೆಳಗ್ಗೆ ಹಿರಿಯೂರು-ಹೊಸದುರ್ಗ ರಸ್ತೆಯಲ್ಲಿ ನೀರು ಹರಿದಿದೆ.
ಕೋಡಿ
ಬಿದ್ದಿದೆ
ಎಂಬ
ಸುದ್ದಿ
ಎಲ್ಲೆಡೆ
ಹರಡುತ್ತಿದ್ದಂತೆ
ಸಾರ್ವಜನಿಕರು
ರಾತ್ರಿಯಿಂದ
ತಂಡೋಪತಂಡವಾಗಿ
ಕೋಡಿ
ಬೀಳುವ
ಜಾಗದತ್ತ
ಬಂದಿದ್ದು,
ಈ
ಮನಮೋಹಕ
ದೃಶ್ಯ
ನೋಡಿ
ಕಣ್ಮುತುಂಬಿಕೊಳ್ಳುತ್ತಿದ್ದಾರೆ.
ಹೊರ
ಜಿಲ್ಲೆಗಳಿಂದಲೂ
ಜನಸಾಗರ
ಹರಿದು
ಬರುತ್ತಿದೆ.
ಅರೆ ಮಲೆನಾಡಿನತ್ತ ಹಿರಿಯೂರು
ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಬಹುತೇಕ ಮಂದಿ ರೈತರು ತಮ್ಮ ಜಮೀನುಗಳಲ್ಲಿ ಅಡಿಕೆ, ತೆಂಗು, ದಾಳಿಂಬೆ, ಬಾಳೆ ಸೇರಿದಂತೆ ಮತ್ತಿತರರ ಬೆಳೆಗಳನ್ನು ನಾಟಿ ಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುವ ಮೂಲಕ ಮುಂದೊಂದು ದಿನ ಅರೆ ಮಲೆನಾಡು ಆಗುವುದರಲ್ಲಿ ಸಂದೇಹವಿಲ್ಲ.
ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಿದ್ದು, ಕೆಲವೆಡೆ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಅಲ್ಲದೇ ಅಚ್ಚುಕಟ್ಟೆ ಪ್ರದೇಶ, ನದಿಪಾತ್ರದ ಕೆರೆಗಳು, ಚೆಕ್ ಡ್ಯಾಂಗಳಿಗೆ ಮತ್ತು ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಡಿಆರ್ಡಿಒ ಕೇಂದ್ರಕ್ಕೆ ಕುಡಿಯುವ ನೀರಿನ ಬವಣೆ ನೀಗತೊಡಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೂ ಜೀವತುಂಬಿದೆ. ಧರ್ಮಪುರ ಕೆರೆಗೆ ಜೀವ ಬಂದಿದೆ.
ಶಾಸಕಿ ನೇತೃತ್ವದಲ್ಲಿ ಗಂಗಾ ಪೂಜೆ
ಹವಾಮಾನ ಇಲಾಖೆಯ ವರದಿಯ ಪ್ರಕಾರ ವೇದಾವತಿ ನದಿ ಪಾತ್ರದಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಕೋಡಿ ಬಿದ್ದಾಗ ಅಕ್ಕಪಕ್ಕದ ಗ್ರಾಮಗಳ ರೈತರ ಜಮೀನುಗಳಿಗೆ ತೊಂದರೆಯಾಗದಂತೆ ನೀರು ಸರಾಗವಾಗಿ ಹರಿದು ಹೋಗಲು ನದಿ ಪಾತ್ರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ವಿವಿ ಸಾಗರ ಜಲಾಶಯದ ಹಿನ್ನೀರಿನ ಕೋಡಿ ಬೀಳುವ ಜಾಗದಲ್ಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಗಂಗಾ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಶಾಸಕಿ ಕೆ.ಪೂರ್ಣಿಮಾ ಇಂದು ಜಿಲ್ಲೆಯ ವಿಶೇಷವಾಗಿ ತಾಲೂಕಿನ ಪ್ರತಿ ಮನೆ, ಮನದಲ್ಲಿಯೂ ಆನಂದ ತುಂಬಿ ತುಳುಕುತ್ತಿದೆ. ಇದಕ್ಕೆ ಕಾರಣೀಭೂತರಾದ ಮೈಸೂರಿನ ಮಹಾರಾಜ ಹಾಗೂ ರಾಣಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಬರದ ಜಿಲ್ಲೆ ಭದ್ರಾ ಯೋಜನೆ ಕೊಟ್ಟ ಮಾಜಿ ಸಿಎಂ ಬಿಎಸ್ವೈ ಹಾಗೂ ಹಾಲಿ ಸಿಎಂ ಬೊಮ್ಮಾಯಿ ಅವರ ಕೊಡುಗೆ ಅಪಾರ.
ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಭೇಟಿ ಸಾಧ್ಯತೆ
ಅಲ್ಲದೇ ಎಲ್ಲಾರ ಹೋರಾಟದ ಫಲ ಭದ್ರಾ ನೀರು ವಿವಿಸಾಗರಕ್ಕೆ ಬರಲು ಕಾರಣ. ಆದ್ದರಿಂದ ಭದ್ರಾ ಹಾಗೂ ವರುಣನ ಆರ್ಶೀವಾದದಿಂದ ಇಂದು 2ನೇ ಬಾರಿಗೆ ಕೋಡಿ ಬಿದ್ದಿದೆ. ಈಗಾಗಲೇ ಸಿಎಂ ಜತೆ ಮಾತನಾಡಿದ್ದು, ಅವರು ಕೂಡಾ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಬರುಲು ತಿಳಿಸಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಕೇಂದ್ರ ಸಚಿವರು, ಹೋರಾಟಗಾರರನ್ನು ಒಳಗೊಂಡತೆ ಬಾಗಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜತೆಗೆ ಈ ಭಾಗದ ಜನರ ಬೇಡಿಕೆ ಸಕ್ಕರೆ ಕಾರ್ಖಾನೆ ಆರಂಭ ಕುರಿತು ಸಿಎಂ ಜತೆ ಚರ್ಚಿಸುತ್ತೇನೆ ಎಂದರು.
ಶುಭ ಕೋರಿದ ಯದುವೀರ್ ಒಡೆಯರ್
ಮೈಸೂರಿನ ಯುದುವೀರ್ ಮಹಾರಾಜರು ವಾಣಿ ವಿಲಾಸ ಸಾಗರವು ಸುಮಾರು 88 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ್ದು, 115ವರ್ಷಗಳ ನಂತರ ಎರಡನೇ ಬಾರಿಗೆ ತುಂಬಿರುವುದು ಅಪಾರ ಸಂತೋಷಕರ ಸಂಗತಿಯಾಗಿದೆ. ನಾನು ವಿಶೇಷವಾಗಿ ಹಿರಿಯೂರು, ಚಿತ್ರದುರ್ಗದ ಜನರಿಗೆ ಮತ್ತು ಇಡೀ ಕರ್ನಾಟಕ ರಾಜ್ಯದ ಜನತೆಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ನಮ್ಮ ರಾಜ್ಯದ ನಿರಂತರ ಏಳಿಗೆಗಾಗಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಫೇಸ್ಬುಕ್ ಖಾತೆ ಮೂಲಕ ಶುಭ ಕೋರಿದ್ದಾರೆ.