ಮೋದಿ ಕ್ಯಾಬಿನೆಟ್ನಲ್ಲಿ ಚಿತ್ರದುರ್ಗ ಸಂಸದನಿಗೆ ಸ್ಥಾನ?
ಚಿತ್ರದುರ್ಗ, ಜುಲೈ 6: ಇದೇ ತಿಂಗಳ ಜುಲೈ 8 ರಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಈ ಹಿನ್ನೆಲೆ ಕರ್ನಾಟಕ ರಾಜ್ಯದಿಂದ ಯಾರು ಯಾರು ಕೇಂದ್ರದಲ್ಲಿ ಸ್ಥಾನಮಾನ ಗಿಟ್ಟಿಸಿಕೊಳ್ಳಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಕ್ಯಾಬಿನೆಟ್ಗೆ ಕರ್ನಾಟಕದ ಚಿತ್ರದುರ್ಗ ಬಿಜೆಪಿ ಸಂಸದರ ಹೆಸರು ಕೇಳಿ ಬರುತ್ತಿದೆ. ಕಾರಣ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ಕೇಂದ್ರದಿಂದ ಬುಲಾವ್ ಬಂದಿದೆ.
ಕುಟುಂಬ ಸಮೇತ ಸಂಸದ ಎ. ನಾರಾಯಣಸ್ವಾಮಿ ದೆಹಲಿಗೆ ತೆರಳಿರುವ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, 2019ರ ಚುನಾವಣೆಯ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಎ. ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು.
ಹಿಂದೊಮ್ಮೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಸಂಸದರಿಗೆ ಅನುಭವ ಇದೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಆಡಳಿತ ಮಾಡುವ ಅವಕಾಶ ಸಿಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
Recommended Video
ಇವರ ಜೊತೆಗೆ ಕರ್ನಾಟಕದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಹಾವೇರಿ- ಗದಗ ಸಂಸದ ಶಿವಕುಮಾರ್ ಉದಾಸಿ, ಕಲಬುರಗಿ ಸಂಸದ ಡಾ. ಉಮೇಶ್ ಜಾದವ್, ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಾಗಲಕೋಟೆ ಸಂಸದ ಪಿ.ಸಿ. ಗದ್ದೀಗೌಡರ್ ಸಂಭವನೀಯ ಪಟ್ಟಿಯಲ್ಲಿ ಹೆಸರುಗಳು ಕೇಳಿ ಬಂದಿವೆ. ಈ ಪಟ್ಟಿಯಲ್ಲಿರುವ ಯಾರು ಯಾರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅದೃಷ್ಟವಂತರು ಯಾರು ಎಂಬುದನ್ನು ಗುರುವಾರದವರೆಗೂ ಕಾಯಬೇಕಿದೆ.