ಚಿತ್ರದುರ್ಗದಲ್ಲಿ 50 ಲಕ್ಷದ ರಸ್ತೆಗೆ ಮೂರೇ ತಿಂಗಳು ವ್ಯಾಲಿಡಿಟಿ!
ಚಿತ್ರದುರ್ಗ, ನವೆಂಬರ್.25: ಸರ್ಕಾರಿ ಕೆಲಸಗಳ ಕಥೆಯೇ ಇಷ್ಟು. ಹೆಸರಿಗೆ ಸರ್ಕಾರಿ ಕೆಲಸ ದೇವರ ಕೆಲಸ. ಆದರೆ, ಸರ್ಕಾರ ನೀಡುವ ಅನುದಾನದ ದುಡ್ಡಲ್ಲ ಭಕ್ತರ ಪಾಲಿಗೆ ವರವಾದ ಉದಾಹರಣೆಗಳೇ ಸಿಗೋದಿಲ್ಲ. ಇಲ್ಲಿ ಏನಿದ್ರೂ ಪೂಜಾರಿಗಳು ಆಡಿದ್ದೇ ಆಟ.
ಮೂಲಭೂತ ಸೌಕರ್ಯ ಒದಗಿಸಲಿ ಎಂದು ಸರ್ಕಾರ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತದೆ. ಒಬ್ಬರ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆದರೆ ಸೂಕ್ತ ಎಂದು ಅದನ್ನು ಕಾಂಟ್ರಾಕ್ಟರ್ ಗಳಿಗೆ ಇಂಜಿನಿಯರ್ ಗಳಿಗೆ ವಹಿಸಲಾಗುತ್ತದೆ. ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲವನ್ನು ಮೇಯ್ದಿದೆ.
ಅನುದಾನ ನಂಬಿ ಹಳೆ ಮನೆ ಕೆಡವಿದರು, ದನದ ಕೊಟ್ಟಿಗೆಯಲ್ಲೇ ಉಳಿದರು
ಅಷ್ಟಕ್ಕೂ ಇದು ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರ ಕಥೆ. ಅಲ್ಲ, ಗ್ರಾಮದಲ್ಲಿರುವ ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರ ನಿತ್ಯ ವ್ಯಥೆ. ಇಷ್ಟೆಕ್ಕೆಲ್ಲ ಕಾರಣವಾಗಿದ್ದು ಒಬ್ಬ ಇಂಜಿನಿಯರ್ ಈಗದೇ ಇಂಜಿನಿಯರ್ ವಿರುದ್ಧ ಶಿಸ್ತು ಕ್ರಮಕ್ಕೆ ರೈತ ಮುಖಂಡರು ಆಗ್ರಹಿಸಿದ್ದಾರೆ.
ಅಸಲಿ ಸಮಸ್ಯೆ ಏನು ಮತ್ತು ಎಲ್ಲಿ?
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಾಷ್ಟೀಯ ಹೆದ್ದಾರಿ ಎನ್.ಹೆಚ್ 4 ಮೇಟಿಕುರ್ಕೆ ಗ್ರಾಮ ಪಂಚಾಯಿತಿ ಕಛೇರಿ ಮುಂಭಾಗದಿಂದ ಯರದಕಟ್ಟೆ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ರಸ್ತೆ ನಿರ್ಮಾಣ ಮಾಡಿ ಇನ್ನೂ ಒಂದು ವರ್ಷ ಕಳೆದಿಲ್ಲ. ಈಗಾಗಲೇ ರಸ್ತೆಯ ಜಲ್ಲಿಕಲ್ಲು ಡಾಂಬರ್ ಎಲ್ಲವೂ ಕಿತ್ತುಕೊಂಡು ರಸ್ತೆ ಹಾಳಾಗಿ ಹೋಗಿದೆ. ಇದರಿಂದ ಈ ರಸ್ತೆಯಲ್ಲಿ ಓಡಾಡಲು ಜನರು ನಿತ್ಯ ಹರಸಾಹಸ ಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
50 ಲಕ್ಷದ ರಸ್ತೆಗೆ ಮೂರೇ ತಿಂಗಳ ವ್ಯಾಲಿಡಿಟಿ
ಚಿತ್ರದುರ್ಗ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ಸುಮಾರು 1.4 ಕಿ.ಮೀ ರಸ್ತೆಗೆ ಭದ್ರಾ ಮೇಲ್ದಂಡೆ ಯೋಜನೆ ನಿಧಿಯಿಂದ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. 50 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆಗೆ ಸರಿಯಾಗಿ ಮೂರು ತಿಂಗಳು ಕೂಡಾ ನೆಟ್ಟಗಿಲ್ಲ ಎಂಬುದು ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿದ್ದು, ಇಂಜಿನಿಯರ್ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
"ಜಾನಪದ ಸಿರಿ" ಸಿರಿಯಜ್ಜಿಯ ನೆನಪಿಗೆ ಸ್ಮಾರಕವಾದರೂ ಬೇಡವೇ?
ಇಂಜಿನಿಯರ್ ಗೆ ಬಿಲ್ ನೀಡದಂತೆ ಒತ್ತಾಯ
ಸದ್ಯ ಚಿತ್ರದುರ್ಗ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ಇಂಜನಿಯರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಾಲಾಗಿದೆ. ರಸ್ತೆ ಗುಣಮಟ್ಟ ಪರೀಕ್ಷಿಸದೇ ಇಂಜನಿಯರ್ ಮೂಡಲಗಿರಿಯಪ್ಪಗೆ ಕಾಮಗಾರಿ ಬಿಲ್ ನೀಡಲಾಗಿದೆ. ಇದರಿಂದ ಕಾಮಗಾರಿ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿದ್ದು, ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಇಂಜನಿಯರ್ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ರೈತ ಮುಖಂಡ ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಆಗ್ರಹಿಸಿದ್ದಾರೆ.
ಇಂಜಿನಿಯರ್ ಸಬೂಬು ಏನು ಗೊತ್ತಾ?
ನೀವೇ ನಿರ್ಮಿಸಿದ ರಸ್ತೆಗೆ ಈ ಪರಿಸ್ಥಿತಿ ಬಂದಿದೆ ಸರ್. ಯಾಕೆ ಹೀಗಾಯ್ತು ಅಂತಾ ಪ್ರಶ್ನೆ ಮಾಡಿದರೆ, ಇಂಜಿನಿಯರ್ ಮೂಡಲಗಿರಿಯಪ್ಪ ನೀಡುವ ಉತ್ತರವೇ ಬೇರೆ. ಅಯ್ಯೋ ಮಳೆ ಬಂದಿದ್ದಕ್ಕೆ ರಸ್ತೆ ಹಾಳಾಗಿದೆ ಇನ್ನೊಂದು ವಾರದಲ್ಲಿ ಮರು ಕಾಮಗಾರಿ ನಿರ್ಮಾಣ ಮಾಡಲಾಗುವುದು ಎಂದು ಸಾಬೂಬು ಹೇಳುತ್ತಾರೆ ಎಂದು ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಆರೋಪಿಸಿದ್ದಾರೆ.