ಮನೆಯಲ್ಲೇ ನಮಾಜ್ ಮಾಡುವಂತೆ ಚಿತ್ರದುರ್ಗ ಡಿಸಿ ಸೂಚನೆ
ಚಿತ್ರದುರ್ಗ, ಏಪ್ರಿಲ್ 21: ಮುಸ್ಲಿಮರ ಪವಿತ್ರ ರಂಜಾನ್ ಮಾಸ ಏಪ್ರಿಲ್ 24 ರಿಂದ ಆರಂಭವಾಗಲಿದ್ದು, ಅಂದು ನಮಾಜ್ ಅಥವಾ ಪ್ರಾರ್ಥನೆಯನ್ನು ತಮ್ಮ ಮನೆಗಳಲ್ಲಿಯೇ ಮಾಡಬೇಕು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಆದೇಶ ಹೊರಡಿಸಿದ್ದಾರೆ.
Recommended Video
ರಂಜಾನ್ ಮಾಸದ ಪ್ರಯುಕ್ತ 5 ಹೊತ್ತಿನ ಪ್ರಾರ್ಥನೆ, ಶುಕ್ರವಾರದ ಪ್ರಾರ್ಥನೆ ಸೇರಿದಂತೆ ತರಾವ್ಹಿ, ನಮಾಜನ್ನು ತಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬೇಕು. ಮಸೀದಿಗಳಲ್ಲಿ ಪೇಶ್ ಇಮಾಮ್, ಮೌಝಿನ್ ರವರು ಮತ್ತು ಸಿಬ್ಬಂದಿ ಮಾತ್ರ ಸಾರ್ವಜನಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಯಾವುದೇ ಪ್ರವಚನಗಳನ್ನು ಆಯೋಜಿಸುವಂತಿಲ್ಲ ಹಾಗೂ ಕಡಿಮೆ ಡೆಸಿಬಲ್ ನಲ್ಲಿ ಧ್ವನಿವರ್ಧಕದ ಮೂಲಕ ಆಜಾನ್ ನೀಡಬೇಕು ಎಂದು ಹೇಳಿದರು.
ಸಹರಿ ಮತ್ತು ಇಫ್ತಾರ್ ಸಮಯವನ್ನು ಜನರಿಗೆ ಧ್ವನಿವರ್ಧಕದ ಧ್ವನಿ ಕಡಿಮೆಗೊಳಿಸಿ ತಿಳಿಸಬೇಕು. ಜಿಲ್ಲೆಯಲ್ಲಿ ಯಾವುದೇ ಇಫ್ತಾರ್ ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ ಮತ್ತು ಇಫ್ತಾರ್ ನ್ನು ಮನೆಗಳಲ್ಲಿಯೇ ನಿರ್ವಹಿಸಬೇಕು. ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ಇತರೆ ಯಾವುದೇ ತಿಂಡಿ ತಿನಿಸುಗಳು ಮತ್ತು ಪಾನೀಯಗಳನ್ನು ತಯಾರಿಸುವಂತಿಲ್ಲ ಹಾಗೂ ವಿತರಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮಸೀದಿ, ದರ್ಗಾಗಳ ಸುತ್ತಮುತ್ತ ಉಪಹಾರ ಅಂಗಡಿ ಹಾಕುವುದನ್ನು ನಿಷೇಧಿಸಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ವಕ್ಫ್ ಆ್ಯಾಕ್ಟ್-1995 ರಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.