ಯಮನ ಆದೇಶ ಮೀರಿದರೆ ಇಲ್ಲಿ ಜೀವ ಹೋಗೋದು ಗ್ಯಾರಂಟಿ
ಚಿತ್ರದುರ್ಗ, ನವೆಂಬರ್ 20: ಇದು ನನ್ನ ಏರಿಯಾ, ಇದು ನನ್ನ ಜಾಗ, ಇಲ್ಲಿ ಯಾಮಾರಿದರೆ ಶಿವನ ಪಾದವೇ ಗತಿ ಅಂತಾ ಸಾಕ್ಷಾತ್ ಯಮನೇ ಬಂದು ಆ ರಸ್ತೆಯಲ್ಲಿ ಕೂತಿದ್ದಾನೆ. ನೀವೇನಾದರೂ ಮೈಮರೆತು ವಾಹನ ಸವಾರಿ ಮಾಡಿದರೆ, ನಿಮ್ಮ ಪ್ರಾಣ ಯಮನ ಕೈಯಲ್ಲಿರುತ್ತದೆ. ಅಯ್ಯೋ ಸಾಕ್ಷಾತ್ ಯಮನೇ ಬಂದು ರಸ್ತೆ ಮೇಲೆ ಕೂತಿದ್ದಾನೆ.
ರಸ್ತೆಯಲ್ಲಿ ವಾಹನಗಳು ವೇಗದ ಮಿತಿ ಮೀರಿ ಸಂಚರಿಸುತ್ತಿದ್ದರಿಂದ, ರಸ್ತೆ ಬದಿ ಫಲಕಗಳನ್ನು ನೆಟ್ಟು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ರಸ್ತೆಗಳು ಈ ದೃಶ್ಯಗಳಿಗೆ ಸಾಕ್ಷಿಯಾಗಿವೆ.
ದಿನಬೆಳಗಾದರೆ ಅಪಘಾತದಲ್ಲಿ ಸಾವುಗಳ ದರ್ಶನವಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಚಳ್ಳಕೆರೆ ತಾಲೂಕಿನ ಹಲವು ರಸ್ತೆಗಳಲ್ಲಿ ಮಿತಿಮೀರಿದ ರಸ್ತೆ ಅಪಘಾತ ತಪ್ಪಿಸಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಚಿತ್ರದುರ್ಗದ ಚಳ್ಳಕೆರೆ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಮಿತಿಮೀರಿದ ಅಪಘಾತಕ್ಕೆ ಎಚ್ಚೆತ್ತ ಪೊಲೀಸರು ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಸಾಕ್ಷಾತ್ ಯಮನ ಭಾವಚಿತ್ರವುಳ್ಳ ಬ್ಯಾನರನ್ನು ಹೆದ್ದಾರಿಗಳಿಗೆ ತಂದು ನಿಲ್ಲಿಸಿದ್ದಾರೆ.
ಇದು ನನ್ ಏರಿಯಾ ನೀವು ಹೆಲ್ಮೆಟ್ ಹಾಕಿ ಓಡಾಡಿ, ಇದು ನನ್ನ ಜಾಗ ಯಾಮಾರಿದರೆ ಶಿವನ ಪಾದವೇ ಗತಿ ಎನ್ನುವ ಜಾಗೃತಿ ಮೂಡಿಸುವ ಪೋಸ್ಟರ್ ಗಳು ವಾಹನ ಸವಾರರ ಗಮನ ಸೆಳೆಯುತ್ತಿವೆ. ಆ ಮೂಲಕ ಈ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡ ಕ್ರಮ ಸ್ಥಳೀಯರಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಇನ್ನು ಚಳ್ಳಕೆರೆ ಪೊಲೀಸರು ತಾಲೂಕಿನಾದ್ಯಂತ ಅತಿ ಹೆಚ್ಚು ಅಪಘಾತ ಆಗುವ ರಸ್ತೆಗಳನ್ನು ಮೇಜರ್ ಹಾಟ್ ಸ್ಪಾಟ್ ರಸ್ತೆಗಳೆಂದು ಗುರುತಿಸಿದ್ದು, ಆ ರಸ್ತೆಯ ಬದಿಗಳಲ್ಲಿ ಯಮನ ಭಾವಚಿತ್ರ ಮೂಡಿಸುವ ಫೋಟೋಗಳನ್ನು ಅಳವಡಿಸಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಕಾರು ಚಾಲಕರು ಸೀಟ್ ಬೆಲ್ಟ್, ಬೈಕ್ ಸವಾರರು ಹೆಲ್ಮೆಟ್, ಭಾರಿ ಪ್ರಮಾಣದ ವಾಹನಗಳ ಸವಾರರಿಗೆ ವೇಗದ ಮಿತಿ ಕುರಿತು ಯಮನ ಭಾವಚಿತ್ರ ತೋರಿಸಿ ಪ್ರಾಣದ ಬೆಲೆ ಜೊತೆಗೆ ನಿಮ್ಮನ್ನು ಹೆಂಡತಿ-ಮಕ್ಕಳು ಕಾಯುತ್ತಿದ್ದಾರೆ. ನಿಮ್ಮ ನಡೆ ಸುರಕ್ಷತೆ ಕಡೆ. ನೋಡಿ ನಡೆ, ರಸ್ತೆ ಕಡೆ ಅನ್ನುವ ಬರಹಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ವಾಹನ ಸವಾರರ ಸುರಕ್ಷತೆಗೆ ಕೈಗೊಂಡ ಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಚಳ್ಳಕೆರೆ ಪೊಲೀಸರು ತೆಗೆದುಕೊಂಡ ಕ್ರಮಕ್ಕೆ ಚಿತ್ರದುರ್ಗ ಎಸ್.ಪಿ ಜಿ.ರಾಧಿಕಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Recommended Video
ಒಟ್ಟಿನಲ್ಲಿ ರಸ್ತೆಗೆ ಇಳಿಯೋ ಮುನ್ನ ಸವಾರಿಗೆ ಜೀವ ಬೇಕಾ.! ಇಲ್ಲ ಯಮನ ಪಾದ ಬೇಕಾ ನಿಮ್ಮ ಜೀವ ನಿಮ್ಮ ಕೈಯಲ್ಲಿ ಅನ್ನುವ ನಾಮಫಲಕಗಳನ್ನು ಹಾಕಿ ವಾಹನ ಸವಾರರ ಸುರಕ್ಷತೆಗೆ ಕ್ರಮ ಕೈಗೊಂಡಿರುವ ಚಿತ್ರದುರ್ಗ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಪಾತ್ರವಾಗಿದೆ.