ಹೊಸ ವರ್ಷಕ್ಕೆ ಈ ಬಾರಿ ಚಿತ್ರದುರ್ಗದಲ್ಲಿ ಸೊಪ್ಪಿನ ಕಡಲೆ ಸಿಗೋದು ಡೌಟು
ಚಿತ್ರದುರ್ಗ. ಡಿಸೆಂಬರ್ 12: ಮಳೆಗಾಲ ಮುಗಿದ ನಂತರ ಚಳಿಗಾಲ ಬಂತೆಂದರೆ ಸೊಪ್ಪಿನ ಕಡಲೆಯದ್ದೇ ಕಾರುಬಾರು. ಬಸ್ ಸ್ಟ್ಯಾಂಡ್, ರೈಲ್ವೆ ನಿಲ್ದಾಣ, ಶಾಲಾ ಕಾಲೇಜುಗಳ ಸಮೀಪ ಎಲ್ಲಿ ನೋಡಿದರೂ ಕಡಲೆ ಗಿಡಗಳನ್ನು ವ್ಯಾಪಾರ ಮಾಡೋರು, ಅದನ್ನು ಕೊಳ್ಳುವವರು ಕಾಣಸಿಗುತ್ತಾರೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಈ ಬಾರಿ ಸೊಪ್ಪಿನ ಕಡಲೆ ಸಿಗೋದು ಅನುಮಾನ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲೂಕುಗಳಲ್ಲಿ ಕಪ್ಪು ಮಣ್ಣಿನ, ಅಂದರೆ ಏರೆ ನೆಲದ ಜಮೀನುಗಳು ಹೆಚ್ಚಾಗಿದ್ದು, ಈ ಭಾಗದಲ್ಲಿ ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕಡಲೆ ಬಿತ್ತನೆ ಮಾಡುತ್ತಾರೆ. ಸಹಜವಾಗಿ ಗಿಡ ಬೆಳೆದರೆ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬೀಳುವ ಇಬ್ಬನಿ ಹನಿಗೆ ಉತ್ತಮ ಇಳುವರಿ ಬಂದು ಜನವರಿ ತಿಂಗಳಿನಲ್ಲಿ ಹಸಿಕಡಲೆ ಗಿಡಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.
ಶಿವಮೊಗ್ಗ; ಇನ್ನೂ ಮೂರು ದಿನ ಅಕಾಲಿಕ ಮಳೆ? ರೈತರಲ್ಲಿ ಮತ್ತೆ ಆತಂಕ
ದುರದೃಷ್ಟವಶಾತ್ ಈ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ನವೆಂಬರ್ ತಿಂಗಳು ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆ ಕಡಲೆ ಗಿಡಕ್ಕೆ ರೋಗ ತಗುಲಿದ್ದು, ಸಂಪೂರ್ಣ ಬೆಳೆ ಒಣಗಿ ಹೋಗಿದೆ. ಹೀಗಾಗಿ ಕಂಗಾಲಾಗಿರುವ ಬಾಲೇನಹಳ್ಳಿಯ ರೈತ ತಿಪ್ಪೇಸ್ವಾಮಿ ನಮಗೆ ತಾತ್ಕಾಲಿಕ ಪರಿಹಾರದ ಜೊತೆಗೆ ಬೆಳೆ ವಿಮೆ ಕೊಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಡಲೆ ಬೆಳೆ ಸಂಪೂರ್ಣ ಒಣಗಿರುವ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿರುವ ಕೃಷಿ ಇಲಾಖೆ ಅಧಿಕಾರಿಗಳು, ಕಳೆದ ತಿಂಗಳು ಅಕಾಲಿಕ ಮಳೆ ಸುರಿದ ಪರಿಣಾಮ ಜಮೀನಿನಲ್ಲಿ ಅಗತ್ಯಕ್ಕಿಂತ ತೇವಾಂಶ ಹೆಚ್ಚಾಗಿದೆ. ರೈತರು ಕೂಡ ಹೆಚ್ಚಿನ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ, ಹೀಗಾಗಿ ಕಡಲೆ ಬೆಳೆಗೆ ಕೊಳೆರೋಗ ತಗುಲಿ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಳೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವರದಿಯನ್ನು ಸರ್ಕಾರಕ್ಕೆ ಕಳುಹಿಸಿ, ರೈತರಿಗೆ ಬೆಳೆ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಚಿತ್ರದುರ್ಗ ಸಹಾಯಕ ನಿರ್ದೇಶಕ, ಕೃಷಿ ಇಲಾಖೆಯ ಅಧಿಕಾರಿ ಡಾ. ಮೋಹನ್ ಕುಮಾರ್.
ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು
ಒಟ್ಟಾರೆ ಹೊಸವರ್ಷದ ಸುಗ್ಗಿಯ ವೇಳೆ ಎಲ್ಲಾ ವಯೋಮಾನದ ಜನರ ಬಾಯಿಗೆ ರುಚಿ ಕೊಡುತ್ತಿದ್ದ ಸೊಪ್ಪಿನ ಕಡಲೆ ಈ ಬಾರಿ ಕೊಳೆ ರೋಗಕ್ಕೆ ತುತ್ತಾದ ಪರಿಣಾಮ ಈ ಬೆಳೆ ಸಿಗುವುದು ಅನುಮಾನ.