ವಿಶೇಷ ಲೇಖನ; ಶತಮಾನ ದಾಟಿದ ಸರ್ಕಾರಿ ಶಾಲೆಯಲ್ಲಿ ಮರದ ನೆರಳಲ್ಲಿ ಪಾಠ!
ಚಿತ್ರದುರ್ಗ, ಅಕ್ಟೋಬರ್ 26; ಕರ್ನಾಟಕ ಸರ್ಕಾರ ಕೋವಿಡ್ ಪರಿಸ್ಥಿತಿ ಬಳಿಕ ಸುಮಾರು 20 ತಿಂಗಳ ನಂತರ ಸರ್ಕಾರ 1 ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಸೋಮವಾರದಿಂದ ಆರಂಭಿಸಿದೆ. ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಓಬಳಾಪುರ ಸಮೀಪದ ಸಿರಿವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಶಿಥಿಲಗೊಂಡ ಶಾಲಾ ಕೊಠಡಿಗಳನ್ನು ದುರಸ್ಥಿ ಮಾಡದೇ ಹಾಗೆಯೇ ಬಿಟ್ಟಿದ್ದು, ಮರದ ನೆರಳು ಶಾಲಾ ಕೊಠಡಿಯಾಗಿದೆ.
ಈ ಶಾಲೆ ಶತಮಾನ ಕಂಡಿದೆ, ಇದೀಗ ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಕೊಠಡಿಗಳಿಲ್ಲದೆ ಮರದ ನೆರಳಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಮಕ್ಕಳಿಗೆ ಎದುರಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು? ಎಂಬ ಪ್ರಶ್ನೆ ಎದುರಾಗಿದೆ.
ಶಿಕ್ಷಕರ ದಿನಾಚರಣೆ ವಿಶೇಷ; ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿದ ಶಿಕ್ಷಕ
ಚಳ್ಳಕೆರೆ ನಗರದಿಂದ ಸುಮಾರು 42 ಕಿ. ಮೀ. ದೂರದಲ್ಲಿರುವ ಹಾಗೂ ಆಂಧ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಸರಿವಾಳ ಗ್ರಾಮದಲ್ಲಿ 1 ರಿಂದ 8 ನೇ ತರಗತಿಯ 270 ವಿದ್ಯಾರ್ಥಿಗಳಿದ್ದಾರೆ. ಆದರೆ ಮಕ್ಕಳಿಗೆ ಸರಿಯಾದ ಬೋಧನಾ ಕೊಠಡಿಗಳು ಇಲ್ಲದೇ ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕೇಳುತ್ತಿದ್ದಾರೆ.
1 ರಿಂದ 5ನೇ ತರಗತಿ ಶಾಲೆ ಓಪನ್; ವೇಳಾಪಟ್ಟಿ ಪ್ರಕಟ
ದುರಸ್ಥಿಗಾಗಿ ಕಾದು ಕುಳಿತಿದೆ ಶಾಲೆ
ಶಾಲೆ ನೂರು ವರ್ಷ ದಾಟಿದ್ದು ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿವೆ. ಕೊಠಡಿಯ ಮೇಲ್ಚಾವಣಿಯ ಹೆಂಚುಗಳು ಹಾರಿ ಹೋಗಿವೆ, ಗೋಡೆ ಕುಸಿದಿವೆ. ಕುಳಿತುಕೊಳ್ಳಲು ಸರಿಯಾದ ಬೆಂಚ್ಗಳಿಲ್ಲ. ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಲಾ ಆಡಳಿತ ಹಾಗೂ ಗ್ರಾಮಸ್ಥರು ಈ ಕುರಿತು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
1 ರಿಂದ 8ರ ತನಕ ಒಟ್ಟು 270 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸುಮಾರು ನಾಲ್ಕೈದು ತರಗತಿಯ ವಿದ್ಯಾರ್ಥಿಗಳು ಪ್ರತಿದಿನ ಮರದ ನೆರಳಲ್ಲಿ ಕುಳಿತುಕೊಂಡು ಮಳೆ, ಗಾಳಿ ಹಾಗೂ ಬಿಸಿಲನ್ನು ಲೆಕ್ಕಿಸದೇ ಪಾಠ ಕೇಳುತ್ತಾರೆ. ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮಕ್ಕಳು ಬಯಲಲ್ಲಿ ಶೌಚಕ್ಕೆ ಹೋಗುತ್ತಾರೆ. ಶಾಲಾ ಕಾಂಪೌಂಡ್ ಇಲ್ಲ, ಇರುವ ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರು ಸಲ ಇಲ್ಲ.
ಅಧಿಕಾರಿಗಳಿಂದ ಸ್ಪಂದನೆ ಇಲ್ಲ
ಈ ಶಾಲೆಯಲ್ಲಿ 270 ವಿದ್ಯಾರ್ಥಿಗಳಿದ್ದು, ಒಟ್ಟು 12 ಕೊಠಡಿಗಳಿವೆ. ಇದರಲ್ಲಿ ನಾಲ್ಕು ಕೊಠಡಿಗಳು ಮಾತ್ರ ಚನ್ನಾಗಿವೆ. ಉಳಿದ 8 ಕೊಠಡಿ ಹಾಳಾಗಿ ಹೋಗಿದ್ದು, ಅರ್ಧ ನೆಲಸಮವಾಗಿವೆ. ತುರ್ತಾಗಿ ನಾಲ್ಕು ಶಾಲಾ ಕೊಠಡಿಗಳು ಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಶಾಲಾ ದುರಸ್ಥಿ ಬಗ್ಗೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯಕ್ಕೆ ಬಂದಾಗ ಗಮನಕ್ಕೆ ತಂದು ಮನವಿ ಮಾಡಲಾಗಿತ್ತು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ ಹಾಗೂ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೊಸ ಕೊಠಡಿಗಳ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ಭರವಸೆ ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಮೃತ್ಯುಂಜಯ.
ಅನಾಹುತಕ್ಕೆ ಆಹ್ವಾನ
ಒಂದು ವೇಳೆ ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಶಾಲಾ ಕಟ್ಟಡ ಹಾಗೂ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗಳ ಮೇಲೆಬಿದ್ದು ಅನಾಹುತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಹೊರುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಇಂತಹ ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳು ಗಮನಕ್ಕೆ ಬಂದಿರುವುದಿಲ್ಲವೇ ಅಥವಾ ನಮ್ಮದು ಗಡಿ ಭಾಗದ ಶಾಲೆಗಳು ಎಂದು ತಾತ್ಸಾರ ಮನೋಭಾವನೆಯನ್ನು ಅಧಿಕಾರಿಗಳು ಹೊಂದಿದ್ದರಾ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
Recommended Video
ಹೋರಾಟದ ಎಚ್ಚರಿಕೆ
ನಮ್ಮ ಗ್ರಾಮದ ಶಾಲೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಿ, ಮಕ್ಕಳ ಕಲಿಕೆಯ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತೆ ಬೋಧನಾ ಕೊಠಡಿಗಳ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಒಂದು ವೇಳೆ ಯಾರೂ ಸ್ಪಂದಿಸದಿದ್ದರೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಪಾತಲಿಂಗಪ್ಪ, ಈಶ್ವರಪ್ಪ, ಪ್ರಕಾಶ್, ಆನಂದ್, ರಾಜು, ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಸರಿವಾಳ ಗ್ರಾಮದ ಸರ್ಕಾರಿ ಶಾಲೆಯ ದುಸ್ಥಿತಿ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಶಿಕ್ಷಣ ಸಚಿವ ನಾಗೇಶ್ ಮಾಡಿಸಿಕೊಡುತ್ತಾರಾ? ಎಂದು ಕಾದು ನೋಡಬೇಕಿದೆ.