ವಿಡಿಯೋ: ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಕಾರು ಅಪಘಾತ
ಚಿತ್ರದುರ್ಗ, ಮೇ 24: ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರು ಪ್ರಾಯಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಹೊರವಲಯದಲ್ಲಿ ಮೇ 24ರಂದು ರಾತ್ರಿ ಕಾರು ಅಪಘಾತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಳ್ಳಕೆರೆಯಿಂದ ಮಸ್ಕಲ್ ಟಿ.ಬಿ. ಗೊಲ್ಲರಹಟ್ಟಿಯ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಶಾಸಕ ರಘುಮೂರ್ತಿ ಅವರ ಇನ್ನೋವಾ ಕಾರಿಗೆ, ಮಸ್ಕಲ್ ಕಡೆಯಿಂದ ಬಂದ ಜೈಲೋ ಕಾರು ಡಿಕ್ಕಿ ಹೊಡೆದಿದ್ದು, ಅವಘಡ ಸಂಭವಿಸಿದೆ.
ಇನ್ನು ಅಪಘಾತದ ರಭಸಕ್ಕೆ ಶಾಸಕರ ಕಾರಿನ ಮುಂಭಾಗ ಜಖಂಗೊಂಡಿದ್ದು ರಘುಮೂರ್ತಿ ಹಾಗೂ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಯಾವುದೇ ತೊಂದರೆ ಆಗಿಲ್ಲ.
ಮಸ್ಕಲ್ ಕಡೆಯಿಂದ ಹಿರಿಯೂರು ಕಡೆಗೆ ಬರುತ್ತಿದ್ದ ಜೈಲೋ ಕಾರು ಶಾಸಕರ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಜೈಲೋ ಕಾರು ಡಿಕ್ಕಿಯಾದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದೆ. ಜೈಲೋ ಕಾರಿನಲ್ಲಿದ್ದವರು ಮದುವೆಗೆ ಹೋಗುತಿದ್ದರು ಎಂದು ತಿಳಿದು ಬಂದಿದೆ. ಜೈಲೋ ಕಾರಿನಲ್ಲಿದ್ದ ಒಂದಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಶಾಸಕ ಟಿ ರಘುಮೂರ್ತಿ ಅವರು ಮಸ್ಕಲ್ ಟಿಬಿ ಗೊಲ್ಲರಹಟ್ಟಿಯಲ್ಲಿ ಮದುವೆಯಾಗಿದ್ದು ಆಗಾಗ ಸಂಬಂಧಿಕರ ಮನೆಗೆ ಭೇಟಿ ನೀಡುತ್ತಿರುತ್ತಾರೆ. ಇನ್ನು ಅಪಘಾತದ ರಭಸಕ್ಕೆ ಶಾಸಕರ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.
ವಿಷಯ ತಿಳಿದ ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿದ್ದ ರಘುಮೂರ್ತಿ ಪುತ್ರ
2016ರಲ್ಲಿ ಹೊಸಕೋಟೆ-ಕೋಲಾರ ಹೆದ್ದಾರಿಯ ಅಟ್ಟೂರು ಬಳಿ ಫೋರ್ಡ್ ಫೀಗೋ ಕಾರು ಪಲ್ಪಿಯಾಗಿ ಸಂಭವಿಸಿದ ಅಪಘಾತದಲ್ಲಿ ಶಾಸಕ ರಘುಮೂರ್ತಿ ಪುತ್ರ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಅಭಿಷೇಕ್ (24) ಮೃತಪಟ್ಟಿದ್ದರೆ, ಉಳಿದ ನಾಲ್ವರು ಗಾಯಗೊಂಡಿದ್ದರು. ಮೃತಪಟ್ಟ ಅಭಿಷೇಕ್ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು.. ಸ್ನೇಹಿತೆ ಹುಟ್ಟುಹಬ್ಬ ಆಚರಣೆ ಮಾಡಲು ಹೋಗುವ ವೇಳೆ ಈ ಅಪಘಾತ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.