ಚಳ್ಳಕೆರೆ ತಹಸೀಲ್ದಾರ್ ಗೆ ನಗರಸಭಾ ಸದಸ್ಯನಿಂದ ಬೆದರಿಕೆ ಕರೆ
ಚಿತ್ರದುರ್ಗ, ಮಾರ್ಚ್ 12: ನಗರ ಸಭಾ ಸದಸ್ಯ ಅಲ್ಲಿಯ ತಹಸೀಲ್ದಾರ್ ಗೆ ಕರೆ ಮಾಡಿ ಅವಾಚ್ಯ ಶಬ್ದದಿಂದ ನಿಂದಿಸಿ ಬೆದರಿಕೆ ಒಡ್ಡಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆ ನಗರಸಭೆ ಸದಸ್ಯ ಶಿವಮೂರ್ತಿ ನನಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ, ಅಷ್ಟೇ ಅಲ್ಲದೆ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಕಾಂತರಾರ್ ಆರೋಪಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶಿವಮೂರ್ತಿ ಈ ಮೊದಲು ಕಾಂಗ್ರೆಸ್ ನಿಂದ ಗೆದ್ದು ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಒಂದೂವರೆ ತಿಂಗಳಲ್ಲಿ ಚಳ್ಳಕೆರೆ ತಹಸೀಲ್ದಾರ್ ಆಗಿ ಇರುವುದಿಲ್ಲ ಎಂದು ಆವಾಜ್ ಹಾಕಿದ್ದಾರೆ. ಕಾಂಗ್ರೆಸ್ ಶಾಸಕ ರಘುಮೂರ್ತಿ ಅಣತಿಯಂತೆ ಆಡಳಿತ ಮಾಡುತ್ತಿದ್ದೀಯ, ಕಚೇರಿಗೆ ಬಂದಾಗ ಏಕವಚನದಲ್ಲಿ ಹೇಳಿ ಹೊರಗೆ ಕಳುಹಿಸುತ್ತೀಯ, ನನ್ನ ಅರೆಸ್ಟ್ ಮಾಡಿಸುವ ತಾಕತ್ತು ನಿನಗಿದೆಯಾ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚಳ್ಳಕೆರೆ ಶಾಸಕ ರಘುಮೂರ್ತಿ, ಸಚಿವ ಹೆಚ್.ಆಂಜನೇಯ ಹೆಸರು ಪ್ರಸ್ತಾಪ ಪ್ರಸ್ತಾಪ ಮಾಡಲಾಗಿದೆ. ಶಾಸಕ, ಸಚಿವರ ಬಗ್ಗೆಯೂ ಅವಾಚ್ಯ ಶಬ್ದ ಬಳಸಿ ಶಿವಮೂರ್ತಿ ಮಾತನಾಡಿದ್ದಾರೆ. ಯಾರಿಗೂ ಹೆದರಿಕೊಂಡು ಕೆಲಸ ಮಾಡುವುದಿಲ್ಲ, ಸರಿಯಾಗಿ ಮಾತನಾಡಿ ಎಂದು ತಹಸೀಲ್ದಾರ್ ಕಾಂತರಾಜ್ ಹೇಳಿದ್ದಾರೆ. ಇಂದು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಡಿಸಿ ಕಚೇರಿಗೆ ದೂರು ಸಾಧ್ಯತೆ ಇದೆ ಎನ್ನಲಾಗಿದೆ.