ಶೀಲ ಶಂಕಿಸಿ ವೃದ್ಧ ಪತ್ನಿ ಹತ್ಯೆ: 75ರ ಆರೋಪಿಗೆ ಜೀವಾವಧಿ ಶಿಕ್ಷೆ
ಚಿತ್ರದುರ್ಗ, ಜುಲೈ.08: ವೃದ್ಧ ನಾರಿ ಪತಿವ್ರತೆ ಅನ್ನುವುದು ಲೋಕರೂಢಿಯ ಮಾತು. ಆದರೆ ಇಂತಹ ಲೋಕರೂಢಿಯ ಮಾತನ್ನು ಧಿಕ್ಕರಿಸಿ, 63ರ ವೃದ್ಧ ಹೆಂಡತಿಯ ಶೀಲ ಶಂಕಿಸಿ ಆಕೆಯನ್ನು ಕೊಲೆಗೈದ 75ರ ಆರೋಪಿಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೇವಲ 11 ದಿನಗಳಲ್ಲಿ ಕೊಲೆ ಆರೋಪಿಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ಹೊಸ ದಾಖಲೆ ಬರೆದಿದೆ. ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದ ಪರಮೇಶ್ವರಸ್ವಾಮಿ(75) ಜೀವಾವಧಿ ಶಿಕ್ಷೆಗೊಳಗಾದ ಪತಿರಾಯ. ಪುಟ್ಟಮ್ಮ(63) ತನ್ನ ಪತಿಯ ಸಂಶಯದ ಭೂತಕ್ಕೆ ಬಲಿಯಾದವರು.
ಗೌರಿ ಲಂಕೇಶ್ ಹತ್ಯೆ ಹಿಂದೆ ಸೇನೆಯ ನಿವೃತ್ತ ಕರ್ನಲ್?
ಪೊಲೀಸರ ಪ್ರಕಾರ ಪರಮೇಶ್ವರಸ್ವಾಮಿ, ಕೆಲವು ದಿನಗಳಿಂದ ತನ್ನ ವೃದ್ಧ ಪತ್ನಿಯ ಶೀಲ ಶಂಕಿಸಿ ಸದಾ ಕಿರುಕುಳ ನೀಡುತ್ತಿದ್ದ. ಕುಡಿದ ಮತ್ತಿನಲ್ಲಿ ಪರಮೇಶ್ವರಸ್ವಾಮಿ ಜೂನ್ 27ರಂದು ಬೆಳಗಿನ ಜಾವ 3 ಗಂಟೆಗೆ ಮನೆ ಒಳಕಲ್ಲಿನ ಗುಂಡಿನಿಂದ ಹೆಂಡತಿಯ ತಲೆಗೆ ಹೊಡೆದು ಸಾಯಿಸಿದ್ದ.
ಮೃತ ಪುಟ್ಟಮ್ಮಳ ಅಣ್ಣ ನಾಗಭೂಷಣ ಕೊಟ್ಟ ದೂರಿನ ಮೇರೆಗೆ ತಳಕು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಜುಲೈ 3ರಿಂದ 5ರವರೆಗೆ ಮೂರು ದಿನಗಳ ಕಾಲ ವಿಚಾರಣೆ ನಡೆಸಿ, ವಾದ ವಿವಾದ ಆಲಿಸಿ ಇದೀಗ ತೀರ್ಪು ನೀಡಿದ್ದಾರೆ.
30 ಸಾಕ್ಷಿಗಳ ಪೈಕಿ 17ರ ಸಾಕ್ಷಿ ಆಧಾರದ ಮೇಲೆ ತೀರ್ಪು ನೀಡಲಾಗಿದೆ. ಆದೇಶ 50 ಪುಟಗಳಷ್ಟಿದ್ದು, ಮೃತಳ ಪುತ್ರ ಗಿರೀಶ್ (39) ನೀಡಿದ ಸಾಕ್ಷವನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ.