ಲೈನ್ ಮ್ಯಾನ್ ಹುದ್ದೆಗೆ ನಕಲಿ ಅಂಕಪಟ್ಟಿ ಸೃಷ್ಟಿ, 6 ಜನರ ಮೇಲೆ ಪ್ರಕರಣ ದಾಖಲು
ಚಿತ್ರದುರ್ಗ, ಮಾರ್ಚ್ 9: ಲೈನ್ ಮ್ಯಾನ್ ಹುದ್ದೆ ಪಡೆಯಲು ಐಟಿಐ ನಕಲಿ ಅಂಕಪಟ್ಟಿ ಸೃಷ್ಟಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರು ಜನರ ವಿರುದ್ಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ಬಹೂದ್ದೂರು ಘಟ್ಟದ ಪ್ರದೀಪ್ ಕುಮಾರ್ (35), ಹನುಗುಂದ ತಾಲ್ಲೂಕಿನ ಕುಂದಗಲ್ ಗ್ರಾಮದ ಚಂದ್ರಶೇಖರ ಕುಸುಬಿ (28), ಬಸವನಬಾಗೇವಾಡಿಯ ಶ್ರೀಶೈಲ ಗಿರಿಯಪ್ಪ ಮುರೋಳ (24), ಶಿರಗುಪ್ಪಿಯ ಸುನೀಲ್ ಸುಭಾಸೃತ್ತೇನವರ್ (24), ಬಿಜಾಪುರದ ಗೋಪಾಲಕೃಷ್ಣ (35), ಮಲ್ಲಿಕಾರ್ಜುನ ಕಸಬಿ ಗೌಡರ್ (28) ಅವರ ಮೇಲೆ ಪ್ರಕರಣ ದಾಖಲಾಗಿದೆ.
ಹಣ ಡಬಲ್ ಮಾಡ್ತೀವಿ ಎಂದು ಟೋಪಿ ಹಾಕಿದ ಕುಶಾಲನಗರದ ಮೂವರ ಬಂಧನ
ಆರು ಜನ ಲೈನ್ ಮ್ಯಾನ್ ಕೆಲಸ ಮಾಡುತ್ತಿದ್ದು, ಇವರ ಮೇಲೆ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಕೂಲ್ಮೆ ಮಹಮದ್ ಸಾಹೇಬ್ ದೂರು ನೀಡಿದ್ದರು.
2015 ಫೆಬ್ರವರಿ 10ರ ಸಹಾಯಕ ಮಾರ್ಗದಾಳು ಹುದ್ದೆಗೆ (ಲೈನ್ ಮ್ಯಾನ್) ಐಟಿಐ ಅಂಕಪಟ್ಟಿಗಳ ಜೇಷ್ಠತೆ ಆಧಾರದ ಮೇಲೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬೆಸ್ಕಾಂ ವಿಭಾಗಕ್ಕೆ ಮೇಲಿನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಹುದ್ದೆಗೆ ಆಯ್ಕೆಯಾದವರು ಸಲ್ಲಿಸಿದ ಅಂಕಪಟ್ಟಿಗಳ ನೈಜತೆಯನ್ನು ಪರೀಕ್ಷಿಸಲು ಬೆಂಗಳೂರಿನ ಕೌಶಲ್ಯ ಭವನದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಸಕ್ಷಮ ಪ್ರಾಧಿಕಾರದ ಆಯುಕ್ತರಿಗೆ ಸಲ್ಲಿಸಲಾಗಿತ್ತು.
ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಸಲ್ಲಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಯುಕ್ತರು ವರದಿ ನೀಡಿದ್ದರ ಮೇರೆಗೆ ಕಾರ್ಯಪಾಲಕ ಎಂಜಿನಿಯರ್ ಸಲ್ಲಿಸಿರುವ ದೂರು ಆಧರಿಸಿ ಹಿರಿಯೂರು ನಗರ ಠಾಣೆ ಪಿಎಸ್ಐ ನಾಗರಾಜ್ ಶನಿವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.