ಚಿತ್ರದುರ್ಗದಲ್ಲಿ ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ: ತಾಯಿ, ಮಗ ಸಾವು
ಚಿತ್ರದುರ್ಗ, ಜೂನ್ 7: ಮುಂದೆ ಚಲಿಸುತ್ತಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಬಳಿ ನಡೆದಿದೆ.
ರಾಮು (30), ಸುವರ್ಣಮ್ಮ (55) ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ತೀರ್ಥಚಾರ್, ಬೆನಕಮ್ಮ , ನಾಗರಾಜ್ ಸೇರಿದಂತೆ
ಮೂವರಿಗೆ ಗಂಭೀರವಾಗಿ ಗಾಯಗೊಂಡು ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹತ್ತಿರ ನಂದಿಹಳ್ಳಿ ಗ್ರಾಮದವರಾಗಿದ್ದು, ಮದುವೆಗೆ ಹುಡುಗಿ ನೋಡಲು ಬೆಂಗಳೂರಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಬರುವಾಗ ಮುಂದೆ ಚಲಿಸುತ್ತಿದ್ದ ಲಾರಿಯೊಂದಕ್ಕೆ ಕಾರು ಡಿಕ್ಕಿಯಾಗಿ ಪಕ್ಕದ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾರು ಸಂಪೂರ್ಣವಾಗಿ ಜಕಂ ಆಗಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.